ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಂಡ್ಯ ಕೊನೆಯ ಓವರ್ ನಲ್ಲಿ 26 ರನ್ ನೀಡಿದ್ದರು. ಸದ್ಯ ಈ ಓವರ್ ಅವರ ಮುಂದಿನ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ ಇದೆ.
ಕೊನೆಯ ಓವರ್ ನಲ್ಲಿ ಎಂ.ಎಸ್. ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಅಲ್ಲದೇ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೂಡ 20 ರನ್ ಗಳಿಂದ ಸೋಲು ಕಂಡಿದೆ. ಹೀಗಾಗಿ ಪಾಂಡ್ಯ ಕಳಪೆ ಬೌಲಿಂಗ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದು ಅವರ ಟಿ20 ವಿಶ್ವಕಪ್ ಕೆರಿಯರ್ ಮೇಲೆ ಕೂಡ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ.
ಟಿ20 ವಿಶ್ವಕಪ್ ಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಲು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂದಾಗಿದ್ದಾರೆ. ಆದರೆ, ಅವರ ಬೌಲಿಂಗ್ ಪ್ರದರ್ಶನದ ಮೇಲೆ ಅವರ ವಿಶ್ವಕಪ್ ಭವಿಷ್ಯ ಅಡಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಬ್ಯಾಟಿಂಗ್ನಲ್ಲಿ ಅಬ್ಬರಿಸುತ್ತಿರುವ ಶಿವಂ ದುಬೆ, ಸ್ಪಿನ್ನರ್ ಯಜುವೇಂದ್ರ ಚಹಲ್ ರನ್ನು ಆಯ್ಕೆ ಸಮಿತಿ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.
ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಸದಸ್ಯರು ಇತ್ತೀಚೆಗೆ ಸಭೆ ನಡೆಸಿದ್ದಾರೆ. ಈ ವೇಳೆ ಹಾರ್ದಿಕ್ ಬಗ್ಗೆಯೂ ಚರ್ಚೆಯಾಗಿದ್ದು, ಅವರು ಐಪಿಎಲ್ನಲ್ಲಿ ಉತ್ತಮವಾಗಿ ಬೌಲ್ ಮಾಡಿದರಷ್ಟೇ ವಿಶ್ವಕಪ್ಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
6 ಪಂದ್ಯಗಳ ಪೈಕಿ 4ರಲ್ಲಿ ಹಾರ್ದಿಕ್ 11 ಓವರ್ ಬೌಲ್ ಮಾಡಿದ್ದಾರೆ. ಆದರೆ 12ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಅದೂ ಕೇವಲ 3 ವಿಕೆಟ್ ಪಡೆದಿದ್ದಾರೆ. ಇದೇ ರೀತಿ ಅವರು ಬೌಲಿಂಗ್ ಮಾಡಿದರೆ, ವಿಶ್ವಕಪ್ ಗೆ ಡೌಟ್ ಎನ್ನಲಾಗುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಉತ್ತಮವಾಗಿ ಆಡುತ್ತಿದ್ದಾರೆ. ಯಜುವೇಂದ್ರ ಚಾಹಲ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರೆ. ಹೀಗಾಗಿ ಇವರನ್ನು ಆಯ್ಕೆ ಸಮಿತಿ ಪರಿಗಣಿಸಬಹುದು ಎನ್ನಲಾಗುತ್ತಿದೆ.