Partition Tragedy – ವಿಭಜನೆಯ ದುರಂತವನ್ನು BJP ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ – ಜೈರಾಮ್ ರಮೇಶ್
ದೇಶ ವಿಭಜನೆಯ ದುರಂತವನ್ನು ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಭಾನುವಾರ ಟೀಕಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಮಾತನಾಡಿ, ಆಗಸ್ಟ್ 14ನ್ನು ದೇಶ ವಿಭಜನಾ ಭೀಕರ ಸಂಸ್ಮರಣಾ ದಿನವನ್ನಾಗಿ ಆಚರಿಸುವುದರ ಹಿಂದೆ ಪ್ರಧಾನಿಯವರ ನಿಜವಾದ ಉದ್ದೇಶವೇ ಬೇರೆಯಿದ್ದು, ಅತ್ಯಂತ ನೋವಿನ ಘಟನೆಗಳನ್ನು ತಮ್ಮ ರಾಜಕೀಯ ಗುರಿ ಮತ್ತು ರಾಜಕೀಯ ಹೋರಾಟಗಳಿಗೆ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಅಂದಿನ ದಾರುಣ ಘಟನೆಗಳಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ, ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು, ಅಗೌರವ ತೋರಬಾರದು ಎಂದಿದ್ದಾರೆ.
ಇದಕ್ಕೂ ಮುನ್ನ ಭಾನುವಾರ ಟ್ವೀಟ್ ಮಾಡಿರುವ ಮೋದಿ, ಆಗಸ್ಟ್ 14ನ್ನು ದೇಶ ವಿಭಜನೆಯ ಭೀಕರತೆಯನ್ನು ನೆನಪಿಸುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ನಮ್ಮ ಇತಿಹಾಸದ ದುರಂತದ ಸಮಯದಲ್ಲಿ ಕಷ್ಟಗಳನ್ನು ಅನುಭವಿಸಿ ಪರಿಶ್ರಮ ಮತ್ತು ಸ್ಥೈರ್ಯದಿಂದ ಅಭಿವೃದ್ಧಿಯತ್ತ ಶ್ರಮಿಸುತ್ತಿರುವ ಎಲ್ಲರನ್ನೂ ಶ್ಲಾಘಿಸುತ್ತೇನೆ ಎಂದು ಹೇಳಿದರು. ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಮಾಡಿದ ಭಾಷಣದಲ್ಲಿ ಆಗಸ್ಟ್ 14 ದೇಶ ವಿಭಜನೆಯ ಭೀಕರತೆಯನ್ನು ನೆನಪಿಸುವ ದಿನ ಎಂದು ಮೋದಿ ಘೋಷಿಸಿದ್ದರು.
ಇದೇ ವೇಳೆ ಮಾತನಾಡಿದ ಜೈರಾಮ್ ರಮೇಶ್ ಅವರು, ವಿಭಜನೆಯ ದುರಂತವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ಮಾಡಬಾರದು, ದ್ವೇಷ ಮತ್ತು ಪೂರ್ವಾಗ್ರಹ ಹರಡುವ ಪ್ರಯತ್ನ ಮಾಡಬಾರದು. “ನಿಜವಾದ ಸತ್ಯವೆಂದರೆ… ಸಾವರ್ಕರ್ ಎರಡು ರಾಷ್ಟ್ರ ಸಿದ್ಧಾಂತವನ್ನು ಹುಟ್ಟು ಹಾಕಿದರು. ಜಿನ್ನಾ ಅದನ್ನು ಪರಿಪೂರ್ಣಗೊಳಿಸಿದರು. ನಾವು ವಿಭಜನೆಯನ್ನು ಒಪ್ಪಿಕೊಳ್ಳದಿದ್ದರೆ, ಭಾರತವು ತುಂಡು ತುಂಡಾಗುತ್ತದೆ ಮತ್ತು ಸಂಪೂರ್ಣವಾಗಿ ಕುಸಿಯುತ್ತದೆ ಎಂದು ಸರ್ದಾರ್ ಪಟೇಲ್ ಬರೆದಿದ್ದಾರೆ, ”ಎಂದು ಅವರು ಹೇಳಿದರು.
ಅಂತಹ ಆಧುನಿಕ ಸಾವರ್ಕರ್ ಮತ್ತು ಜಿನ್ನಾ ದೇಶವನ್ನು ವಿಭಜಿಸುವ ಪ್ರಯತ್ನವನ್ನು ಮುಂದುವರೆಸುತ್ತಿದ್ದಾರೆ ಎಂದು ಆರೋಪಿಸಿದರು. ದೇಶವನ್ನು ಒಗ್ಗೂಡಿಸಲು ಸಹಕರಿಸಿದ ಗಾಂಧಿ, ನೆಹರು, ಪಟೇಲ್ ಮತ್ತು ಇತರ ನಾಯಕರ ಪರಂಪರೆಯನ್ನು ಉಳಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗಲೂ ಬದ್ಧವಾಗಿರುತ್ತದೆ ಮತ್ತು ದ್ವೇಷದ ರಾಜಕಾರಣವನ್ನು ಸೋಲಿಸಲಾಗುವುದು ಎಂದು ಹೇಳಿದರು.