ಯಾದಗಿರಿ : ಮುಖ್ಯಮಂತ್ರಿಗಳೇ, ನಮ್ಮ ಕೈ ಬಿಡಬೇಡಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ದಯವಿಟ್ಟು ನಮ್ಮ ಅಳಲು ಕೇಳಿ ಎಂದು ಯಾದಗಿರಿ ಜಿಲ್ಲೆಯ ರೈತರೊಬ್ಬರು ವಿಡಿಯೋ ಮೂಲಕ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಯಾದಗರಿ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದೆ. ಇದರಿಂದ ಹಳ್ಳ-ಕೊಳ್ಳಗಳು ತುಂಬಿ ಹೊಲ ಗದ್ದೆಗಳು ಸೇರಿದಂತೆ ತಗ್ಗು ಪ್ರದೇಶದ ಮನೆಗಳಿ ಮಳೆ ನುಗ್ಗುತ್ತಿವೆ. ಮಳೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತಿದ ಬೆಳೆ ನಾಶವಾಗಿದೆ. ಈ ಹಿನ್ನೆಲೆ ಬೆಳೆ ಕಳೆದುಕೊಂಡ ಕನ್ಯಾಕೊಳ್ಳೂರಿನ ರೈತ ಭೀಮರಾಯಪ್ಪ ತಮ್ಮ ಹೊಲದ ಪರಿಸ್ಥಿತಿ ವಿವರಿಸಿ ವೀಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ ರೈತ ಭೀಮರಾಯಪ್ಪ ತನ್ನ 5 ಎಕರೆಯಲ್ಲಿ ಲಕ್ಷಾಂತರ ರೂಪಾಯ ಖರ್ಚು ಮಾಡಿ ಹತ್ತಿ ಬಿತ್ತಿದ್ದರು. ಆದರೆ ಮಳೆಯ ಪ್ರಮಾಣ ಜಾಸ್ತಿಯಾಗಿ ಹಳ್ಳ ತುಂಬಿ ಸಾಗರದಂತೆ ಜಮೀನಿಗೆ ನೀರು ನುಗ್ಗಿವೆ. ಇದರಿಂದ ಹತ್ತಿ ಬಿತ್ತನೆ ಮಾಡಿದ ಹೊಲವೆಲ್ಲಾ ಕೊಚ್ಚಿಕೊಂಡು ಹೋಗಿ ಹತ್ತಿ ನೀರುಪಾಲಾಗಿದೆ. ಇದರಿಂದ ಕಂಗಾಲಾಗಿರುವ ರೈತ ಭೀಮರಾಯಪ್ಪ ವಿಡಿಯೋ ಮೂಲಕ ತಮ್ಮ ಪರಿಸ್ಥಿತಿಯನ್ನು ವಿವರಿಸಿ ನೆರವು ಕೇಳಿದ್ದಾರೆ.