ಪುನೀತ್ ಸಾವಿನ ಸುದ್ದಿ ಕೇಳಿ ಮೂವರು ಅಭಿಮಾನಿಗಳು ಸಾವು – ಆತ್ಮಹತ್ಯೆಗೆ ಯತ್ನಿಸಿದ ಮೂವರು
ಚಂದನವನದ ಹೃದಯವಂತ ಪುನೀತ್ ರಾಜ್ ಕುಮಾರ್ ನಿಧನದಿಂದ ಸ್ಯಾಂಡಲ್ ವುಡ್ ಬರಡಾಗಿದೆ. ಲಕ್ಷಾಂತರ ಅಭಿಮಾನಿಗಳು ಅಪ್ಪು ಅಂತಿಮ ದರ್ಶನಕ್ಕಾಗಿ ದೌಡಾಯಿಸುತ್ತಿದ್ದಾರೆ. ಆದ್ರೆ ಅಪ್ಪು ನಿಧನದ ಆಘಾತ ತಡೆಯಲಾರದೇ ಪ್ರತ್ಯೇಕ ಕಡೆಗಳಲ್ಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದಾರೆ. ಇನ್ನೂ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳ್ಳಾರಿಯ ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಬಂಡಿಕೇರಿ ನಿವಾಸಿ (40) ಸಾದಪ್ಪ ಎಂಬಾತ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತ ಬೆಳಗಾವಿಯಲ್ಲಿ ಅಭಿಯೊಬ್ಬ ಪುನೀತ್ ರಾಜ್ಕುಮಾರ್ ಇಲ್ಲದ ಜಗತ್ತಿನಲ್ಲಿ ಇರಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಮುನ್ನ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ರಾಹುಲ್ ಗಡಿವಡ್ಡರ ಎಂಬ ಪುನೀತ್ ರಾಜ್ ಅಭಿಮಾನಿ ಆತ್ಮಹತ್ಯ ಮಾಡಿಕೊಂಡು ಸಾವನಪ್ಪಿದ್ದಾನೆ. ಚಾಮರಾಜನಗರದಲ್ಲಿ ಅಭಿಮಾನಿಯೊಬ್ಬ ಈ ಸುದ್ದಿ ಗೊತ್ತಾಗ್ತಿದ್ದಂತೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ.
ರಾಯಚೂರಿನ ಸಿಂಧನೂರಿನಲ್ಲಿ ಇಬ್ಬರು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಅವರನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಡುಪಿಯಲ್ಲಿ ಆಟೋ ಡ್ರೈವರ್ ಆಗಿರುವ ಸತೀಶ್ ಎಂಬಾತ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದು, ಅಪ್ಪು ಸಾವಿನ ನೋವು ತಾಳಲಾರದೆ ತನ್ನ ಕೈಯನ್ನೇ ಜಜ್ಜಿಕೊಂಡು ಗಾಯ ಮಾಡಿಕೊಂಡಿದ್ದಾನೆ.