ಪುನೀತ್ ಗೆ “ಪದ್ಮಶ್ರೀ” ಯಾಕೆ…? ಅಪ್ಪು “ಅಮಶ್ರೀ” : ಶಿವಣ್ಣ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇವತ್ತಿಗೆ 11 ದಿನ ಕಳೆದಿದೆ.. ಆದ್ರೂ ಅವರ ಅಕಾಲಿಕ ನಿಧನದ ನೋವಿನಿಂದ ಅವರ ಕುಟುಂಬ , ಕರುನಾಡಿನ ಜನ ಹೊರ ಬಂದಿಲ್ಲ. ಈ ನಡುವೆ ಅಪ್ಪುಗೆ ಪದ್ಮಶ್ರೀಗಾಗಿ ಗಣ್ಯರು , ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.. ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ ಕಾರ್ಯದಲ್ಲಿ ಬಾಗಿಯಾಗಿದ್ದ ಶಿವಣ್ಣ ಈ ವಿಚಾರವಾಗಿ ಮಾತನಾಡಿದ್ದಾರೆ. ಪದ್ಮಶ್ರೀ ಯಾಕೆ, ಪುನೀತ್ ಅಮರ ಶ್ರೀ. ಹೆಸರ ಪಕ್ಕದಲ್ಲೊಂದು ಟೈಟಲ್ ಅಷ್ಟೆಯಾಗಿದೆ. ಎಲ್ಲರ ಆತ್ಮದಲ್ಲಿಯೂ ಅಪ್ಪು ಶ್ರೀಯಾಗಿರುತ್ತಾನೆ ಅದೇ ನಮಗೆ ದೊಡ್ಡುದು ಎಂದು ಹೇಳಿದ್ದಾರೆ.
ಇದೇ ವೇಳೆ ಗದ್ದಲ ಆಗೋದು ಬೇಡ ಎಂದು ಅಭಿಮಾನಿಗಳಿಗೆ ಅಪ್ಪು ಸಮಾಧಿ ಬಳಿ ಬರಲು ಅವಕಾಶ ನೀಡಿಲ್ಲ. ನಾವು 11 ದಿನದ ಕಾರ್ಯ ಎಂದು ಮಾಡುತ್ತಿರುವುದೇ ನೋವಿನ ಸಂಗತಿಯಾಗಿದೆ. ಬೆಳಗ್ಗೆ ಅಂದುಕೊಳ್ಳತ್ತಾ ಇದ್ದೆ, ಇದೆಲ್ಲಾ ಅವನಿಗೆ ಮಾಡಬೇಕಾ? ಎಂದು ನೋವಾಯಿತು. ಅಭಿಮಾನಿಗಳಿಗೆ ಮೊದಲು ಬಿಡಬೇಕು ಆದರೆ ಕುಟುಂಬದ ಕೆಲವು ಆಚಾರ, ಸಂಸ್ಕೃತಿಯನ್ನು ನಾವು ಅನುಸರಿಸಬೇಕು ಎಂದಿದ್ದಾರೆ.
ಇನ್ನೂ ನೋವು ಇದೆ ಆದರೆ ಎಲ್ಲಾ ಕಾರ್ಯ ಮಾಡಬೇಕಿದೆ. ನನಗೆ ಇದನ್ನು ಬಿಟ್ಟು ಬೇರೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಇವತ್ತು ಮನೆಯಲ್ಲಿ ಪೂಜೆ ಇದೆ. ಈ ವಿಚಾರವಾಗಿ ಅಣ್ಣನಾಗಿ ಮಾತನಾಡೋದು ಕಷ್ಟವಾಗಿದೆ. ಅಪ್ಪುನನ್ನು ಕಳೆದುಕೊಂಡಿರುವುದು ನನ್ನ ಮಗ, ನನ್ನ ಬಲಗೈ ಹೋದಾಗಿದೆ. ನಾನು ಅಳಬಹುದು, ದುಃಖವನ್ನು ನಾನು ತೋಡಿಕೊಳ್ಳಬಹುದು. ನಾನು ಜೀವಂತವಾಗಿ ಇರುವವರೆಗೂ, ನನ್ನ ಜೀವ ಹೋದ ಮೇಲೂ ಈ ನೋವು ಹೋಗಲ್ಲ ಎಂದಿದ್ದಾರೆ.
ಇನ್ನೂ ಅಪ್ಪು ಖುಷಿ ಆಗಬೇಕಾದರೆ ಜನ ಪ್ರಾಣ ಕಳೆದುಕೊಳ್ಳಬಾರದು. ಅಪ್ಪು ಹೆಸರನ್ನು ಉಳಿಸಲು ನೀವು ಪ್ರಯತ್ನಪಡಬೇಕು. ನಿಮ್ಮ ಕುಟುಂಬ ನಿಮ್ಮನ್ನು ನಂಬಿಕೊಂಡು ಇದೆ. ನಿಮ್ಮ ಕೈಲಿ ಆದಷ್ಟು ಬೇರೆಯವರಿಗೆ ಸಹಯ ಮಾಡಿ. ಪ್ರಾಣವನ್ನು ಮಾತ್ರ ಕಳೆದುಕೊಳ್ಳ ಬೇಡಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಈಗಾಗಲೇ ನಾವೆಲ್ಲ ನೋವನಲ್ಲಿ ಇದ್ದೇವೆ. ಅಪ್ಪು ಹೋಗಿದ್ದಾನೆ ಎಂದು ಯಾಕೆ ಅಂದು ಕೊಳ್ಳುತ್ತೀರ, ನಮ್ಮಲ್ಲಿ ಇದ್ದಾರೆ ಅಂತಾ ತಿಳಿದುಕೊಳ್ಳಿ. ಪುನೀತ್ ತಂದೆಗೆ ತಕ್ಕ ಮಗ ಎಂದಿದ್ದಾರೆ.