ಏನು ಹೇಳುವುದಕ್ಕೂ ತೋಚುತ್ತಿಲ್ಲ ; ರವಿ, ಇರಬೇಕಿತ್ತು ಇನ್ನಷ್ಟು ಕಾಲ
ಮೈಸೂರು : ಅಕ್ಷರ ಮಾಂತ್ರಿಕ, ರವಿ ಬೆಳಗೆರೆಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದು, ಹೇಳದೇ ಬಂದು ಕೇಳದೇ ಹೋಗುವ ಕಾಲನ ಕಾಲ್ಗುಣವೇ ಹಾಗೆ..! ಬೆಳಗೆರೆ, ಇಷ್ಟು ಬೇಗ ಎದ್ದು ಹೋಗಬಾರದಿತ್ತು ಹೀಗೆ …! ಏನು ಹೇಳುವುದಕ್ಕೂ ತೋಚುತ್ತಿಲ್ಲ ; ರವಿ , ಇರಬೇಕಿತ್ತು ಇನ್ನಷ್ಟು ಕಾಲ ಎಂದು ಹಿರಿಯ ಪತ್ರಕರ್ತ ಟಿ. ಗುರುರಾಜ್ ಕಂಬನಿ ಮಿಡಿದಿದ್ದಾರೆ.
ಹೊಳೆನರಸೀಪುರದ ಜಗುಲಿ ,ದೇವಸ್ಥಾನದ ಮೆಟ್ಟಿಲು ,ಹೇಮಾವತಿಯ ದಂಡೆ, ಹುಬ್ಬಳ್ಳಿಯ ಕೊಪ್ಪಿಕರ
ರಸ್ತೆಯ ಸಂಯುಕ್ತ ಕರ್ನಾಟಕ, ಚಂದ್ರಕಾಂತ ನಗರದ ಚಾಳ್,
ಬೆಂಗಳೂರಿನ ಕರ್ಮವೀರ ಕಚೇರಿ, ಪದ್ಮನಾಭ ನಗರದ ಪುಟ್ಟ ಮಹಡಿ ಮನೆ, ಹಾಯ್ ಬೆಂಗಳೂರಿನ ಆಫೀಸು, ಅಗಾಧವಾದ ಓದು, ಕೇಳಿಸಿಕೊಳ್ಳುವ ತನ್ಮಯತೆ, ಲೀಲಾಜಾಲ ಬರೆವಣಿಗೆ , ಲೆಕ್ಕವಿಡದಷ್ಟು ಐಲು – ತಿಕ್ಕಲು, ಕುಡಿತ- ಸಿಗರೇಟು – ಸೆಕ್ಸು, ಹೊಕ್ಕಳ ಬಳ್ಳಿಯಿಂದ ಹುಟ್ಟುತ್ತಿದ್ದ ಆ ಮಾತು……
ಒಹ್, ಅವೆಷ್ಟು ನೆನಪುಗಳ ಸಾಲು!
ರವಿ ಬೆಳಗೆರೆ ಎಂಬ ಅಕ್ಷರ ಮಾಂತ್ರಿಕ ಜತೆಗಿಲ್ಲ ಎಂಬುದೇ ಒಂದು ಮಹಾನೋವು .
ಬರೆದರೆ ಹೊರೆಯಾಗುವಷ್ಟು ನೋವಿನ ಸ್ಟಾಕುಗಳಿವೆ, ಸ್ನೇಹ , ಪ್ರೀತಿ, ವಿಶ್ವಾಸದ ಒಟ್ಟಿಗೆ ಜಗಳ-ಕೊಲ್ಲುವಷ್ಟು ದ್ವೇಷವಿದ್ದ,ರೂ , ಹಗೆತನ ಹೊಗೆಯಾಡದಂತೆ ಕಳೆದ ದಿನಗಳೆಲ್ಲ ಕಣ್ಣೆದುರು ಮೆರವಣಿಗೆ ನಡೆಸುತ್ತಿವೆ.
ಏನೇ ಇರಲಿ –
ಅದ್ಭುತ ಪ್ರತಿಭೆ ಮತ್ತು ಅಸಂಖ್ಯಾತ ಪ್ರಕ್ಷುಬ್ಧತೆಗಳನ್ನು ಒಡಲೊಳಗಿಟ್ಟುಕೊಂಡು ತಣ್ಣಗೆ ನಗು – ನಗುತ್ತಾ ನಡೆದಾಡುತ್ತದ್ದ ರವಿ ಬೆಳಗೆರೆ ಎಂಬ ಅದ್ಭುತದ ಹೆಜ್ಜೆಗಳಿಗೀಗ
ಪೂರ್ಣ ವಿರಾಮ.
ಹಿರಿಯ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ: ಅಕ್ಷರ ಲೋಕದ `ರವಿ’ ಅಸ್ತಂಗತ..!
ಅದೆಷ್ಟೇ ವಾದ – ವಿವಾದಗಳಿರಲಿ , ಕನ್ನಡ ಪತ್ರಿಕೋದ್ಯಮಕ್ಕೊಂದು ಹೊಸ ಭಾಷ್ಯ ಬರೆದ ಮಾಂತ್ರಿಕನ ಬೆರಳುಗಳು ನಿಶ್ಚಲವಾಗಿವೆ.
ಯಾರು ಬೇಡವೆಂದರೂ ,ನೀವು ಹೊರಟಾಗಿದೆ. ನಿಮ್ಮೆಡೆಗಿನ ಕಡುಕೋಪ-ಕಡುಪ್ರೀತಿಗಳೆರಡೂ
ನನ್ನ ಕೊನೆಯುಸಿರಿನವರೆಗೂ ಜೀವಂತವಾಗಿರುತ್ತವೆ.
ರವಿಯನ್ನು ಸಹಿಸಿಕೊಂಡು, ಸಲಹಿದ ಭೂಮಿ ತೂಕದ ಲಲಿತಾ ಮೇಡಂ ಅವರ ಸಂಕಟ ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. ಬೆಳಗೆರೆಯ ಬದುಕು ಅವರು, ಅವರಿಂದಾಗಿ ಮಾತ್ರವೇ ರವಿ, ಈವರೆಗೆ ಉಳಿದದ್ದು. ಅವರ ಕಣ್ಣೇರು ಆದಷ್ಟು ಬೇಗ ಕರಗಿಹೋಗಲಿ.
ಯಾರು ಅತ್ತರೂ – ಸತ್ತರೂ ನೆನಪುಗಳು ಸಾಯುವುದಿಲ್ಲ.
ನೀವು ಇಲ್ಲೇ ಅಕ್ಕ – ಪಕ್ಕವೇ ಇದ್ದೀರಿ. ಬೈ ರವಿ ಎಂದು ಟಿ. ಗುರುರಾಜ್ ಅವರು ರವಿ ಬೆಳಗೆರೆ ನಿಧನಕ್ಕೆ ಕಣ್ಣೀರಿನ ವಿದಾಯ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel