ರೆಮ್ಡಿಸಿವಿರ್ ಅಗತ್ಯ ಮೀರಿ ಬಳಸಿದ್ರೆ ಆರೋಗ್ಯಕ್ಕೆ ಹಾನಿ : ಡಾ.ಸುಧಾಕರ್
ಚಿತ್ರದುರ್ಗ : ರೆಮ್ಡಿಸಿವಿರ್, ಆಕ್ಸಿಜನ್ ವೈದ್ಯರ ಸಲಹೆ ಮೇರೆಗೆ ಬಳಸಬೇಕು. ಅಗತ್ಯ ಮೀರಿ ಹೆಚ್ಚು ಬಳಸಿದರೆ ಆರೋಗ್ಯಕ್ಕೆ ಹಾನಿಕರ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ರಾಜ್ಯದ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿ ಇಳಿಕೆ ಕಾಣುತ್ತಿದೆ. ಆದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ಹೆಚ್ಚುತ್ತಿದೆ.
ಪಾಸಿಟಿವಿಟಿ ರೇಟ್ ಶೇ.20ರಷ್ಟು ಏರಿಕೆ ಕಾಣುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಕಡಿಮೆ ಇದೆ. ಹೋಂ ಐಸೋಲೇಷನ್ ನಿಂದ ಮನೆಮಂದಿಗೆ ಹರಡುವ ಸಾಧ್ಯತೆ.
ಹೋಂ ಐಸೋಲೇಷನ್ ನಲ್ಲಿರುವವರನ್ನು ಕೇರ್ ಸೆಂಟರ್ ಗೆ ಕಡ್ಡಾಯ ಶಿಫ್ಟ್ ಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇನ್ನು ಆಕ್ಸಿಜನ್ ಅಗತ್ಯತೆ ಬಗ್ಗೆ ವರದಿ ಕೊಟ್ಟ ಬಳಿಕ ಸಮರ್ಪಕ ಪೂರೈಕೆ ಮಾಡಲಾಗುತ್ತದೆ. ಜಿಲ್ಲೆಗೆ ಸುಮಾರು 8ಕೆಎಲ್ ಆಕ್ಸಿಜನ್ ಅಗತ್ಯವಿದೆ.
ಸೋಂಕು ಕಡಿಮೆ ಆಗುತ್ತಿರುವ ಜಿಲ್ಲೆಯಲ್ಲಿ ಉಳಿಯುವ ಆಕ್ಸಿಜನ್ ಚಿತ್ರದುರ್ಗಕ್ಕೆ ಪೂರೈಕೆ ಮಾಡಲಾಗುವುದು. ಆರೋಗ್ಯ ಇಲಾಖೆ ಅಧಿಕಾರಿಗಳು ಸವಾಲಾಗಿ ಸ್ವೀಕರಿಸಬೇಕು.
ಕೊರೊನಾ ಎರಡನೇ ಅಲೆ ನಿಜಕ್ಕೂ ಆತಂಕ ಹುಟ್ಟಿಸಿದೆ. ರೆಮ್ಡಿಸಿವಿರ್ ಸೇರಿ ಅಗತ್ಯ ಮೆಡಿಸಿನ್ ಜಿಲ್ಲೆಗೆ ಸರಬರಾಜು ಮಾಡಲಾಗುವುದು. 30ಕ್ಕೂ ಅಧಿಕ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಸೂಚನೆ ನೀಡಲಾಗಿದೆ.
9ಜನ ಸ್ಪೆಷಲಿಸ್ಟ್, 3 ಎಂಬಿಬಿಎಸ್ ವೈದ್ಯರನ್ನು ವಾರದೊಳಗೆ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು.









