ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆಗೆ ನೀಚ ರಾಜ`ಕಾರಣ’..!!
ವಿಧಾನ ಪರಿಷತ್ ನ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಚಿಕ್ಕಮಗಳೂರು ಜಿಲ್ಲೆ ಗುಣಸಾಗರದಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಧರ್ಮೇಗೌಡರ ಆತ್ಮಹತ್ಯೆಗೆ ಕಾರಣವೇನು ಅನ್ನೋದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದ್ರೆ ಡಿಸೆಂಬರ್ 15 ರಂದು ಪರಿಷತ್ ನಲ್ಲಿ ನಡೆದ ಗಲಾಟೆಯೇ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಈಗಾಗಲೇ ಬಿಸಿಬಿಸಿ ಚರ್ಚೆಗಳು ಮಾಧ್ಯಮಗಳಲ್ಲಿ ಶುರುವಾಗಿವೆ.
ಆತ್ಮಹತ್ಯೆಗೆ ನೀಚ ರಾಜ`ಕಾರಣ’..!!
ಹೌದು..! ಧರ್ಮೇಗೌಡರ ಆತ್ಮಹತ್ಯೆ ಪ್ರಕರಣವನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ರೆ ಹಲವಾರು ವಿಚಾರಗಳು ನಮ್ಮ ತಲೆಗೆ ಬರುತ್ತವೆ. ಅವರೇ ಹೇಳಿಕೊಂಡಿರುವ ಪ್ರಕಾರ ಅಂದು ನಾನಾಗಿಯೇ ಸಭಾಪತಿ ಸ್ಥಾನದಲ್ಲಿ ಕುಳಿತುಕೊಳ್ಳಲಿಲ್ಲ. ನಾಯಕರ ಒತ್ತಡ ಮೇರೆಗೆ ನಾನು ಆ ರೀತಿ ಮಾಡ್ದೆ. ಆದ್ರೆ ಅಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ ಅಂತಾ ತಮ್ಮ ಆಪ್ತರ ಬಳಿ ಧರ್ಮೇಗೌಡರು ಹೇಳಿಕೊಂಡಿದ್ದಾರೆ.
ಅಂದ್ರೆ ವಿಧಾನ ಪರಿಷತ್ ನ ಘಟನೆಯಿಂದ ಖಿನ್ನತೆಗೆ ಒಳಗಾಗಿ ಅವರು ಈ ರೀತಿ ಮಾಡಿಕೊಂಡಿರುವುದು ನಿಜವಾಗಿದ್ದರೇ ಇದು ಇಡೀ ರಾಜಕೀಯ ವ್ಯವಸ್ಥೆ ತಲೆತಗ್ಗಿಸಲೇಬೇಕಾದ ಸಂದರ್ಭ ಹಾಗೂ ಅಧಿಕಾರದ ಲಾಲಸೆಗೆ ಬಿದ್ದಿರುವ ರಾಜಕಾರಣಿಗಳು ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ಳಬೇಕಾದ ಸಮಯ.
ಯಾಕೆಂದ್ರ ಡಿಸೆಂಬರ್ 15 ರಂದು ಪರಿಷತ್ ನಲ್ಲಿ ನಡೆದ ಘಟನೆ ರಾಜ್ಯದ ಮಾನಮರ್ಯಾದೆಯನ್ನ ಹರಾಜು ಹಾಕಿತ್ತು. ಅದೇ ರೀತಿ ಅಂದು ನಡೆದ ಘಟನಾವಳಿಗಳನ್ನು ಗಮಸಿದ್ರೆ, ಧರ್ಮೇಗೌಡರು ಯಾರದ್ದೋ ಒತ್ತಡ, ಯಾರದ್ದೋ ಲಾಭಕ್ಕಾಗಿ ಸಭಾಪತಿ ಸ್ಥಾನದಲ್ಲಿ ಬಂದು ಕುತ್ಕೋತಾರೆ. ಆಗ ವಿರೋಧ ಪಕ್ಷಗಳು ಕನಿಷ್ಠ ಸೌಜನ್ಯವನ್ನ ಮರೆತು ಧರ್ಮೇಗೌಡರನ್ನು ಎಳೆದಾಡುತ್ತಾರೆ. ಇತ್ತ ಆಡಳಿತ ಪಕ್ಷದವರೂ ಕೂಡ ವಿರೋಧ ಪಕ್ಷದವರನ್ನ ತಡೆಯೋದನ್ನ ಬಿಟ್ಟು, ಧರ್ಮೇಗೌಡರನ್ನ ಬಲವಂತವಾಗಿ ಸಭಾಪತಿ ಸ್ಥಾನದಲ್ಲಿ ಕೂರಿಸುವ ಕೆಲಸ ಮಾಡ್ತಾರೆ. ಈ ಇಬ್ಬರ ಮಧ್ಯೆ ಧರ್ಮೇಗೌಡರು ಬಲಿಕಾ ಬರ್ಕ ಆಗ್ಬಿಟ್ಟಿರ್ತಾರೆ. ಅಂದ್ರೆ ಅಧಿಕಾರಕ್ಕಾಗಿ ಮೂರನ್ನೂ ಬಿಟ್ಟವರಂತೆ ವರ್ತಿಸುತ್ತಿದ್ದ ಅಲ್ಲಿನ ಕೆಲ ರಾಜಕಾರಣಿಗಳ ಮಧ್ಯೆ ಧರ್ಮೇಗೌಡರು ಸಿಕ್ಕಿ ಹಾಕಿಕೊಂಡಿರುತ್ತಾರೆ. ಅಯ್ಯೋ ಇದು ನನಗೆ ಬೇಕಿತ್ತಾ…? ಇದರಿಂದ ನನ್ನತನ ಹಾಳಾತ್ತಾ..? ಅನ್ನೋ ಯೋಚನೆಗಳು ಧಮೇಗೌಡರಲ್ಲಿ ಮೂಡಲು ರಾಜಕಾರಣಿಗಳ ವರ್ತನೆ ಕಾರಣವಾಗಿರುತ್ತೆ.
ಇನ್ನು ಪರಿಷತ್ ಘಟನೆ ಬಳಿಕ ತುಂಬಾ ನೊಂದಿದ್ದ ಧರ್ಮೇಗೌಡರು ತಮ್ಮ ಆಪ್ತರ ಬಳಿ ಕೂಡ ಈ ಬಗ್ಗೆ ಮಾತನಾಡಿ ಬೇಸರ ಹೊರಹಾಕಿದ್ದಾರೆ ಅಂತ ತಿಳಿದು ಬಂದಿದೆ.
ಇದಲ್ಲದೇ ಇದೀಗ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಕೂಡ ‘ಎಲ್ಲೋ ಒಂದು ಕಡೆ ಧಮೇಗೌಡ ಅವರ ಸಾವಿಗೆ ನಾವೂ ಕಾರಣವಾಗಿದ್ದೇವೆ. ಪರಿಷತ್ ನಲ್ಲಿ ನಡೆದ ಆ ಘಟನೆಯಿಂದಲೇ ಧರ್ಮೇಗೌಡರು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋದನ್ನ ಒಪ್ಪಿಕೊಂಡಿದ್ದಾರೆ.
ಒಟ್ಟಾರೆ ಧಮೇಗೌಡರ ಆತ್ಮಹತ್ಯೆಗೆ ವಿಧಾನ ಪರಿಷತ್ ಘಟನೆಯೇ ಕಾರಣ ಅನ್ನೋದಾದ್ರೆ, ಇಲ್ಲಿ ನಿಜವಾಗಿಯೂ ಅವರ ಈ ನಿರ್ಧಾರಕ್ಕೆ ನೀಚ ರಾಜಕಾರಣವೇ ಕಾರಣ ಅನ್ನೋದು ನೂರಕ್ಕೆ ನೂರು ಸತ್ಯ. ಈ ಹಿಂದೆ ಸದನದಲ್ಲಿ ಆ ಚಿತ್ರಗಳನ್ನು ನೋಡಿ, ದೇಶದ ಮುಂದೆ ರಾಜ್ಯದ ಮಾನಮರ್ಯಾದೆಯನ್ನ ಹರಾಜು ಹಾಕಲಾಗಿತ್ತು. ಇದೀಗ ಈ ಘಟನೆ ಕರ್ನಾಟಕದ ಭವ್ಯ ರಾಜಕೀಯ ಪರಂಪರೆಗೆ ಕಪ್ಪುಚುಕ್ಕೆಯಾಗಿದೆ.
ಧಮೇಗೌಡರ ಆತ್ಮಹತ್ಯೆ ಕರ್ನಾಟಕ ರಾಜಕಾರಣದ ಪಾಲಿಗೆ ಕಪ್ಪುಚುಕ್ಕೆ ಮಾತ್ರವಲ್ಲ, ಕರಾಳ ದಿನವೂ ಕೂಡ ಹೌದು.. ಇಂದು ಮೌಲ್ಯಾಧಾರಿತ ರಾಜಕಾರಣದ ಸಮಾಧಿಯಾಗಿದಂತಾಗಿದೆ. ಸಿದ್ದಾಂತ, ಮೌಲ್ಯ, ಬದ್ಧತೆಗಳನ್ನು ಬದಿಗೊತ್ತಿ ಕೇವಲ ಅಧಿಕಾರದ ಆಸೆ, ತಮ್ಮ ಸ್ವಾರ್ಥಕ್ಕೆ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳು ಇಂತಹ ಘಟನೆಗಳಿಂದಾದರೂ ಬದಲಾಗಬೇಕಿದೆ.
“ರಾಜಕೀಯ ಎಂದ್ರೆ `ರಾ’ ಅಂದ್ರೆ ರಾಕ್ಷಸರಂತೆ, `ಜ’ ಅಂದ್ರೆ ಜನರನ್ನ, `ಕೀ’ ಅಂದ್ರೆ ಕಿತ್ತು ತಿನ್ನುವ, `ಯ’ ಅಂದ್ರೆ ಯಂತ್ರ”ದಂತಾಗಿರೋದು ದೃರದೃಷ್ಠಕರ ಸಂಗತಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










