ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಗುಂಡು ಹಾರಿಸಿದ ಕಿಡಗೇಡಿ
ಹಾವೇರಿ: ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಚಿತ್ರಮಂದಿರದಲ್ಲಿ ಯುವಕನೋರ್ವ ಗುಂಡು ಹಾರಿಸಿದ ಪರಿಣಾಮ, ಯುವಕನೋರ್ವ ಗಾಯಗೊಂಡಿದ್ದಾನೆ.
ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಕ್ಷುಲಕ ಕಾರಣಕ್ಕೆ ಕಿಡಗೇಡಿ ಗುಂಡು ಹಾರಿಸಿದ್ದು, 27 ವರ್ಷದ ವಸಂತಕುಮಾರ ಶಿವಪುರ ಅವರ ಹೊಟ್ಟೆಯ ಭಾಗ ಮತ್ತು ಕಾಲಿಗೆ ಗುಂಡು ತಗುಲಿದೆ. ದುಷ್ಕರ್ಮಿ ರಿವಾಲ್ವಾರ್ನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ.
ಇನ್ನೂ ಗಾಯಗೊಂಡಿರುವ ವಸಂತಕುಮಾರ ಶಿವಪುರ ಅವರನ್ನು ಶಿಗ್ಗಾವಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿತ್ರಮಂದಿರದಲ್ಲಿ ಗುಂಡು ಹಾರಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರವೀಕ್ಷಣೆ ವೇಳೆ ಕಾಲು ತಗುಲಿದೆ ಎಂಬ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.