ಕೋವಿಡ್ ಆತಂಕ – ಶ್ರೀಲಂಕಾ -ಟೀಮ್ ಇಂಡಿಯಾ ಏಕದಿನ ಟಿ-ಟ್ವೆಂಟಿ ಸರಣಿ ಜುಲೈ18ರಿಂದ ಆರಂಭ
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ ಕೋವಿಡ್ 19 ಅಡ್ಡಿಯನ್ನುಂಟು ಮಾಡಿದೆ. ಹೀಗಾಗಿ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗಳ ವೇಳಾಪಟ್ಟಿಯನ್ನು ಮುಂದೂಡಲಾಗಿದೆ.
ಈ ಹಿಂದೆ ಜುಲೈ 13ರಿಂದ ಏಕದಿನ ಸರಣಿ ಆರಂಭವಾಗಬೇಕಿತ್ತು. ಆದ್ರೆ ಶ್ರೀಲಂಕಾ ತಂಡಡ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಮತ್ತು ಡಾಟಾ ತಂತ್ರಜ್ಞ ಜಿ,ಟಿ. ನಿರೋಶಾನ್ ಕೊರೊನಾ ಸೋಂಕು ದೃಢವಾಗಿದೆ. ಇಂಗ್ಲೆಂಡ್ ಸರಣಿಯ ನಂತರ ಶ್ರೀಲಂಕಾಗೆ ಆಗಮಿಸಿದ್ದರು. ಇದೀಗ ಬಿಸಿಸಿಐ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜುಲೈ 13ರ ಬದಲು ಜುಲೈ 18ರಿಂದ ಏಕದಿನ ಸರಣಿ ಆರಂಭವಾಗಲಿದೆ ಜುಲೈ 20 ಮತ್ತು 23ರಂದು ಕ್ರಮವಾಗಿ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳು ನಡೆಯಲಿವೆ.
ಹಾಗೇ ಟಿ-ಟ್ವೆಂಟಿ ಸರಣಿಯ ಮೊದಲ ಪಂದ್ಯ ಜುಲೈ 25ರಂದು ನಡೆಯಲಿದೆ. ಇನ್ನುಳಿದಂತೆ ಜುಲೈ 27 ಮತ್ತು 29ರಂದು ಇನ್ನುಳಿದ ಎರಡು ಪಂದ್ಯಗಳು ನಡೆಯಲಿವೆ.
ಇದೇ ವೇಳೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕೂಡ ಮುಂದೂಡಿದೆ. ಶ್ರೀಲಂಕಾ ಪ್ರೀಮಿಯರ್ ಲೀಗ್ ಜುಲೈ 30ರಿಂದ ಆರಂಭವಾಗಬೇಕಿತ್ತು, ಇದೀಗ ನವೆಂಬರ್ -ಡಿಸೆಂಬರ್ ನಲ್ಲಿ ಆಯೋಜನೆ ಮಾಡಲಾಗುತ್ತಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಬಿಸಿಸಿಐ ಬಳಿ ಸರಣಿಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿತ್ತು. ಪರಿಸ್ಥಿತಿಯನ್ನು ಅರಿತುಕೊಂಡು ಬಿಸಿಸಿಐ ಕೂಡ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮನವಿಗೆ ಸಹಮತವನ್ನು ಸೂಚಿಸಿದೆ.
ಟೀಮ್ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ರಾಹುಲ್ ದ್ರಾವಿಡ್ ತಂಡದ ಹೆಡ್ ಕೋಚ್ ಆಗಿದ್ದಾರೆ. ಈ ನಡುವೆ, ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ ಬಿಸಿಸಿಐ ಟೀಮ್ ಇಂಡಿಯಾದ ಬಿ ತಂಡವನ್ನು ಕಳಹಿಸಿದೆ. ಈ ಸರಣಿಯನ್ನು ಆಡಲು ಒಪ್ಪಿಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅರ್ಜುನ್ ರಣತುಂಗಾ ಅವರ ಈ ಹೇಳಿಕೆಗೆ ಭಾರತದ ಕೆಲವು ಮಾಜಿ ಕ್ರಿಕೆಟಿಗರು ತಿರುಗೇಟು ನೀಡಿದ್ದರು.









