ಮರಳಿನಲ್ಲಿ ಚಿತ್ರ ಬಿಡಿಸಿ ಅಮಿತಾಬ್ ಗಾಗಿ ಪ್ರಾರ್ಥಿಸಿದ ಕಲಾವಿದ ಸುದರ್ಶನ್
ಮುಂಬೈ, ಜುಲೈ 13: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಕೊರೋನಾ ಸೋಂಕು ತಗುಲಿರುವ ಸುದ್ದಿ ಹೊರಬರುತ್ತಲೇ ಅವರ ಅಸಂಖ್ಯಾತ ಅಭಿಮಾನಿ ವರ್ಗ ಆತಂಕಕ್ಕೆ ಒಳಗಾಗಿದ್ದು, ಬೇಗನೆ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಕೂಡ ಬಿಗ್ ಬಿ ಅಮಿತಾಬ್ ಅವರು ಬೇಗನೆ ಗುಣಮುಖರಾಗಲಿ ಎಂದು ಮರಳಿನಲ್ಲಿ ಚಿತ್ರ ಬಿಡಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಒಡಿಶಾದ ಪೂರಿ ಬೀಚ್ ಒಂದರಲ್ಲಿ ಮರಳಿನಲ್ಲಿ ಅಮಿತಾಭ್ ಬಚ್ಚನ್ ಅವರ ಚಿತ್ರ ರಚಿಸಿ.. ನಿಮ್ಮ ಜೊತೆ ಲಕ್ಷಾಂತರ ಮಂದಿಯ ಆಶೀರ್ವಾದವಿದೆ. ಆದಷ್ಟು ಬೇಗನೆ ಗುಣಮುಖರಾಗಿ ಎಂದು ನಾವು ಜಗನ್ನಾಥನ ಬಳಿ ಪ್ರಾರ್ಥನೆ ಮಾಡುತ್ತೇವೆ.ನಿಮ್ಮ ಮತ್ತು ನಿಮ್ಮ ಕುಟುಂಬಸ್ಥರ ಆರೋಗ್ಯಕ್ಕಾಗಿಯೂ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಆರಾಧ್ಯ ರೈ ಬಚ್ಚನ್ ಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.