ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾದ್ರೆ ಕಾಂಗ್ರೆಸ್ ಕಾರಣ : ಸುನೀಲ್ ಕುಮಾರ್
ಬೆಂಗಳೂರು : ಕಾಂಗ್ರೆಸ್ ಪಾದಯಾತ್ರೆಗೆ ಸಚಿವ ಸುನೀಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾದರೇ ಕಾಂಗ್ರೆಸ್ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್, ಕಾಂಗ್ರೆಸ್ ಪಾದಯಾತ್ರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಾಯಕತ್ವಕ್ಕೆ ನಡೆಯುತ್ತಿರುವ ಯಾತ್ರೆ.
ರಾಜಕೀಯ ಮೇಲಾಟದ ಯಾತ್ರೆ ಇದು. ಕಾಂಗ್ರೆಸ್ ನಾಯಕರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ನಾಯಕರನ್ನು ಬಂಧಿಸೋದು ದೊಡ್ಡ ವಿಚಾರ ಅಲ್ಲ.
ಆದರೆ ವಿಪಕ್ಷ ನಾಯಕರಿಗೆ, ಆಡಳಿತ ನಡೆಸಿದವರಿಗೆ ಜವಾಬ್ದಾರಿ ಬೇಕು. ಅನಿವಾರ್ಯ ಎಂದಾದಾಗ ಏನು ಕ್ರಮ ಮಾಡಬೇಕು ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.
ಅಂದು ಆಕ್ಸಿಜನ್, ಬೆಡ್ ಬೇಕು ಎಂದು ಪ್ರತಿಭಟನೆ ಮಾಡಿದ್ರಿ, ಅಂದು ಪ್ರತಿಭಟನೆ ಮಾಡಿದವರಿಗೆ ಇವತ್ತು ಯಾಕೆ ಕಾಳಜಿ ಇಲ್ಲ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.
ಇನ್ನು ಕಾಂಗ್ರೆಸ್ ಆಡಳಿತ ಇರುವ ಪಂಜಾಬ್, ತಮಿಳುನಾಡು, ರಾಜಸ್ಥಾನದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇಲ್ಲಿ ವಿಪಕ್ಷವಾದ ಕಾಂಗ್ರೆಸ್ ಗೆ ಸಹ ಅದೇ ಜವಾಬ್ದಾರಿ ಇರಬೇಕಲ್ಲ ಎಂದರು.