ಕೋಲ್ಕತ್ತ: ಪಶ್ಚಿಮ ಬಂಗಾಳದ ಜಲ್ ಪೈಗುರಿ ಜಿಲ್ಲೆಯಲ್ಲಿ ಭೀಕರ ಬಿರುಗಾಳಿ ಬೀಸಿದ್ದು, ಐವರು ಬಲಿಯಾಗಿರುವ ಘಟನೆ ನಡೆದಿದೆ.
ಬಿರುಗಾಳಿಯ ಪ್ರಭಾವದಿಂದ ಹಲವು ಮನೆಗಳು ಹಾಗೂ ಮರಗಳು ನೆಲಸಮಗೊಂಡಿವೆ. ಅಲ್ಲದೇ, ಬಿರುಗಾಳಿಗೆ ಐವರು ಬಲಿಯಾಗಿದ್ದಾರೆ. 500ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಪತ್ತು ಸಂಭವಿಸಿದೆ. ಇದರ ಪರಿಣಾಮವಾಗಿ ಹಲವಾರು ಮನೆಗಳು ಹಾನಿಗೊಳಗಾಗಿವೆ. ಐವರು ಸಾವನ್ನಪ್ಪಿದ್ದು, ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅಧಿಕಾರಿಗಳು ಅಗತ್ಯ ನೆರವು ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಜಲ್ ಪೈಗುರಿ-ಮೈನಾಗುರಿ ಪ್ರದೇಶಗಳಲ್ಲಿ ಮಧ್ಯಾಹ್ನ ಹಠಾತ್ ಮಳೆ ಮತ್ತು ಬಿರುಗಾಳಿಯಿಂದ ಜೀವಹಾನಿ, ಮನೆ ಹಾನಿ, ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಅನಾಹುತ ಸಂಭವಿಸಿವೆ. ಜಲ್ ಪೈಗುರಿಯ ಹಲವು ಎಕರೆಗಳಲ್ಲಿ ಕೃಷಿ ಭೂಮಿ ಮತ್ತು ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ಅಧಿಕಾರಿಗಳೊಂದಿಗೆ ಮಾತನಾಡಿ, ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಸೂಕ್ತ ನೆರವು ನೀಡುವಂತೆ ತಿಳಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.