ಮೈಸೂರು,ಜ.19: ರೈತ ತನ್ನ ಬೆಳೆಗೆ ತಾನೇ ಬೆಲೆ ನಿಗದಿಪಡಿಸಬೇಕು. ತಮ್ಮ ಬೆಳೆಗೆ ತಾವೇ ಬ್ರ್ಯಾಂಡ್ ಮಾಡಿದಲ್ಲಿ ರೈತರ ಆದಾಯ ಖಂಡಿತವಾಗಿಯೂ ದ್ವಿಗುಣಗೊಳ್ಳಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದ್ದಾರೆ.
ಮೈಸೂರಿನ ಸಿಎಫ್ ಟಿಆರ್ಐ ಸಭಾಂಗಣದಲ್ಲಿ ನಡೆದ ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ)ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ರೈತರು ತಮ್ಮ ಬೆಳೆಗೆ ತಾವೇ ಬ್ರ್ಯಾಂಡ್ ರೂಪಿಸಬೇಕು. ಆಹಾರ ಉತ್ಪನ್ನಗಳ ಸಂಸ್ಕರಣೆಯ ಜೊತೆಗೆ ಮಾರ್ಕೇಟಿಂಗ್ ಕೂಡ ಜ್ಞಾನ ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತಿದೆ.
ಕೃಷಿ ಉದ್ಯಮ ರೈತೋದ್ಯಮವಾಗಬೇಕು. ರೈತನು ಕೃಷಿ ಉದ್ಯಮಿಯಾಗಬೇಕು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ರಾಜ್ಯದ ಕೃಷಿ ಚಟುವಟಿಕೆಗಳನ್ನು ಅರಿಯಲು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಉತ್ಪಾದನೆಯ ಜೊತೆಗೆ ಉತ್ಪನ್ನಗಳ ಸಂಸ್ಕರಣೆ, ಅವುಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಹುಮುಖ್ಯವೆಂಬುದನ್ನು ಮನಗಂಡು, ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ ಅವರನ್ನು ಲಾಭದಾಯಕ ಕೃಷಿಯತ್ತ ಕೊಂಡೊಯ್ಯಲಯ ಸಿಎಫ್ ಟಿಆರ್ ಐ ಜೊತೆ ಸಭೆ ನಡೆಸಿ ರೈತರಿಗೆ ತರಬೇತಿ ನೀಡಲು ತೀರ್ಮಾನಿಸಿ, ಒಂದು ಜಿಲ್ಲೆ ಒಂದುಉತ್ಪನ್ನ ಯೋಜನೆಯಡಿ ಹಣ್ಣು ತರಕಾರಿಗಳು, ತೋಟಗಾರಿಕಾ, ಸಾಂಬಾರು, ಸಿರಿಧಾನ್ಯಗಳು, ಎಣ್ಣೆಕಾಳು, ಬೇಕರಿ ಉತ್ಪನ್ನಗಳು ಸೇರಿದಂತೆ ಹೀಗೆ ವಿವಿಧ ರೈತ ಉತ್ಪನ್ನ ಬೆಳೆಗಳ ಸಂಸ್ಕರಣೆ ಮಾರುಕಟ್ಟೆಗೆ ತರಬೇತಿ ನೀಡಲಾಗುತ್ತಿದೆ ಎಂದರು.
ತರಬೇತಿ ಪಡೆದ ರೈತರಿಗೆ ಪಿಎಂಎಫ್ ಎಂಇ ಯೋಜನೆಯಡಿ ಆಯ್ಕೆಯಾದ ಜಿಲ್ಲೆಯ ಉತ್ಪನ್ನಕ್ಕೆ ಚಿಕ್ಕ ಉದ್ದಿಮೆ ಪ್ರಾರಂಭಿಸಲು ಶೇ.35 ರಷ್ಟು ಸಹಾಯಧನವನ್ನು ಗರಿಷ್ಠ 10 ಲಕ್ಷ ರೂ.ಗಳವರೆಗೆ ನೀಡಲಾಗುವುದು.
ಅಲ್ಲದೇ ಯೋಜನೆಯ ವಿವಿರನ್ನು ಕೇಂದ್ರಕ್ಕೆ ಕಳುಹಿಸಿ ಹೆಚ್ಚಿನ ಅನುದಾನ ನೀಡುವಂತೆ ಶಿಫಾರಸು ಮಾಡಲಾಗುವುದು. ಈಗಾಗಲೇ ಕೃಷಿ ಇಲಾಖೆಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡ 2020-21 ನೇ ಸಾಲಿನಲ್ಲಿ ಸುಮಾರು 45 ಕೋ.ರೂ.ಗಳ ಅನುದಾನ ನಿಗದಿಪಡಿಸಲಾಗಿದೆ. ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ತರಬೇತಿಯ ಸದುಪಯೋಗಪಡಿಸಿಕೊಂಡು ಕೃಷಿಯು ಉದ್ದಿಮೆಯಾಗಬೇಕು ರೈತ ರೈತೋದ್ಯಮಿಯಾಗಬೇಕು ಎಂದು ಬಿ.ಸಿ.ಪಾಟೀಲ್ ತರಬೇತಿದಾರರಿಗೆ ಈ ಸಂದರ್ಭದಲ್ಲಿ ಶುಭಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಫ್ ಟಿಆರ್ಐ ನಿರ್ದೇಶಕಿ ಡಾ.ಶ್ರೀದೇವಿ ಸಿಂಗ್, ವಿಜ್ಞಾನಿಗಳಾದ ಡಾ:ಮಣಿಲಾಲ್, ಡಾ.ಉಮೇಶ್ ಹೆಬ್ಬಾರ್ ಸೇರಿದಂತೆ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









