ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಇಂದು ಹೊಸ ಯುಗವೊಂದು ಆರಂಭವಾಗಿದೆ. ಕಳೆದ ಒಂದೂವರೆ ದಶಕದಿಂದ ಅಜೇಯರಾಗಿ ಮೆರೆದಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ಅಂತಿಮ ತೆರೆ ಬಿದ್ದಿದ್ದು, ಭಾರತೀಯ ಜನತಾ ಪಕ್ಷ ಮೊದಲ ಬಾರಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಐತಿಹಾಸಿಕ ಬದಲಾವಣೆಯ ಮಹಾ ರೂವಾರಿ ಸುವೇಂದು ಅಧಿಕಾರಿ ಈಗ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟ ಸೇರಲು ಸಜ್ಜಾಗಿದ್ದಾರೆ.
ಭವಾನಿಪುರ ಕ್ಷೇತ್ರದಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಅವರನ್ನೇ 15 ಸಾವಿರ ಮತಗಳ ಭರ್ಜರಿ ಅಂತರದಿಂದ ಮಣಿಸಿರುವ ಸುವೇಂದು ಅಧಿಕಾರಿ, ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಂದು ಕಾಲದಲ್ಲಿ ಮಮತಾ ಅವರ ಪರಮ ಆಪ್ತ ಮತ್ತು ಬಲಗೈ ಬಂಟನಂತಿದ್ದ ಸುವೇಂದು, ಇಂದು ಅವರನ್ನೇ ಅಧಿಕಾರದಿಂದ ಕೆಳಗಿಳಿಸಿರುವುದು ಇಡೀ ದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ರಾಜಕೀಯ ರಕ್ತದಲ್ಲೇ ಬಂದ ನಾಯಕತ್ವ
ಸುವೇಂದು ಅಧಿಕಾರಿ ಅವರ ಈ ಅದ್ಭುತ ಯಶಸ್ಸಿನ ಹಿಂದೆ ಸುದೀರ್ಘ ರಾಜಕೀಯ ಹೋರಾಟದ ಹಿನ್ನೆಲೆಯಿದೆ. 1970 ಡಿಸೆಂಬರ್ 15 ರಂದು ಮೇದಿನಿಪುರದ ಕರ್ಕುಲಿ ಗ್ರಾಮದಲ್ಲಿ ಜನಿಸಿದ ಇವರು, ಕರಾವಳಿ ಬಂಗಾಳದ ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವರು. ಇವರ ತಂದೆ ಶಿಶಿರ್ ಅಧಿಕಾರಿ ಅವರು ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ ಪ್ರಭಾವಿ ನಾಯಕರು. ತಂದೆಯ ಹಾದಿಯಲ್ಲೇ ಸಾಗಿಬಂದ ಸುವೇಂದು, ಆರಂಭದಿಂದಲೂ ಜನಸಾಮಾನ್ಯರ ಜೊತೆಗಿನ ಸಂಪರ್ಕದ ಮೂಲಕ ಪ್ರಬಲ ನಾಯಕರಾಗಿ ಬೆಳೆದಿದ್ದಾರೆ.
ಕಾಂಗ್ರೆಸ್ನಿಂದ ಬಿಜೆಪಿಯವರೆಗೆ ಸುವೇಂದು ಪಯಣ
1995 ರಲ್ಲಿ ಕಾಂತಿ ಪುರಸಭೆಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ಆಗಿ ಅಧಿಕಾರ ವಹಿಸಿಕೊಂಡ ಸುವೇಂದು ಅಧಿಕಾರಿ, ನಂತರ ಮಮತಾ ಬ್ಯಾನರ್ಜಿ ಅವರ ಹೋರಾಟಕ್ಕೆ ಸಾಥ್ ನೀಡಲು 1998 ರಲ್ಲಿ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾದರು. 2006 ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಅವರು, ನಂತರ 2009 ಮತ್ತು 2014 ರ ಲೋಕಸಭಾ ಚುನಾವಣೆಗಳಲ್ಲಿ ಸಿಪಿಐಎಂನ ದಿಗ್ಗಜ ಲಕ್ಷ್ಮಣ ಸೇಠ್ ಅವರಂತಹ ನಾಯಕರನ್ನು ಸೋಲಿಸುವ ಮೂಲಕ ತೃಣಮೂಲ ಕಾಂಗ್ರೆಸ್ನ ಶಕ್ತಿಯಾಗಿ ಹೊರಹೊಮ್ಮಿದ್ದರು. 2007 ರ ನಂದಿಗ್ರಾಮ ಆಂದೋಲನದ ಸಮಯದಲ್ಲಿ ಸುವೇಂದು ಅವರು ಮಮತಾ ಬ್ಯಾನರ್ಜಿ ಅವರ ಅತ್ಯಂತ ವಿಶ್ವಾಸಾರ್ಹ ಸೇನಾನಿಯಾಗಿದ್ದರು.
ಮಮತಾ ಜೊತೆಗಿನ ಸಂಘರ್ಷ ಮತ್ತು ಕೇಸರಿ ಪಡೆಗೆ ಸೇರ್ಪಡೆ
ತೃಣಮೂಲ ಕಾಂಗ್ರೆಸ್ನಲ್ಲಿ ಎರಡನೇ ಅತಿ ದೊಡ್ಡ ನಾಯಕನಾಗಿ ಬೆಳೆದಿದ್ದ ಸುವೇಂದು ಅವರಿಗೆ ಮಮತಾ ಬ್ಯಾನರ್ಜಿ ಅವರು ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು ಅಸಮಾಧಾನ ತಂದಿತ್ತು. ಪಕ್ಷದಲ್ಲಿನ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ ಸುವೇಂದು, 2020 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಅಂದಿನಿಂದ ದೀದಿ ವಿರುದ್ಧ ಸಮರ ಸಾರಿದ ಅವರು, 2021 ರಲ್ಲಿ ನಂದಿಗ್ರಾಮದಲ್ಲಿ ಮಮತಾ ಅವರನ್ನು ಮಣ್ಣುಮುಕ್ಕಿಸಿದ್ದರು. ಇದೀಗ 2026 ರಲ್ಲಿ ಭವಾನಿಪುರದಂತಹ ದೀದಿಯ ಭದ್ರಕೋಟೆಯಲ್ಲೂ ವಿಜಯಮಾಲೆ ಧರಿಸುವ ಮೂಲಕ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ನಿಲ್ಲಿಸಿದ್ದಾರೆ.
ಬಂಗಾಳದ ಜನತೆ ಬದಲಾವಣೆಯನ್ನು ಬಯಸಿದ್ದರು ಎಂಬುದು ಈ ಫಲಿತಾಂಶದಿಂದ ಸಾಬೀತಾಗಿದೆ. ಸುವೇಂದು ಅಧಿಕಾರಿ ಅವರ ನಾಯಕತ್ವದಲ್ಲಿ ಪಶ್ಚಿಮ ಬಂಗಾಳದ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಲಿದೆ ಎಂಬ ನಿರೀಕ್ಷೆ ಕೇಸರಿ ಕಾರ್ಯಕರ್ತರಲ್ಲಿ ಮನೆಮಾಡಿದೆ. ಸುವೇಂದು ಅವರ ಈ ಗೆಲುವು ಕೇವಲ ವ್ಯಕ್ತಿಯ ಗೆಲುವಲ್ಲ, ಅದು ಬಂಗಾಳದ ಬದಲಾದ ರಾಜಕೀಯ ಹಾದಿಯ ಸಂಕೇತವಾಗಿದೆ.







