3 ದಿನದಲ್ಲಿ 3 ಸಚಿವರ ರಾಜಿನಾಮೆ – ಬಿಜೆಪಿಯಲ್ಲಿ ರಾಜಿನಾಮೆ ಪರ್ವ
ಯುಪಿಯಲ್ಲಿ ಬಿಜೆಪಿ ನಾಯಕರ ರಾಜೀನಾಮೆ ಪರ್ವ ಮುಂದುವರೆದಿದೆ. ಯೋಗಿ ಸರ್ಕಾರದ ಸಚಿವ ಧರಂ ಸಿಂಗ್ ಸೈನಿ ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಧರಂ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡಿದ ಮೂರನೇ ಸಚಿವರಾಗಿದ್ದಾರೆ . ಇದಕ್ಕೂ ಮುನ್ನ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ದಾರಾ ಸಿಂಗ್ ಪಕ್ಷ ತೊರೆದಿದ್ದರು.
ಸಚಿವರಷ್ಟೆ ಅಲ್ಲದೇ ಗುರುವಾರದಂದು ಧರಂಸಿಂಗ್ ಸೈನಿ ಅವರಿಗೂ ಮುನ್ನ ಬಿಜೆಪಿಯ ಮತ್ತಿಬ್ಬರು ಶಾಸಕರಾದ ಮುಖೇಶ್ ವರ್ಮಾ ಮತ್ತು ವಿನಯ್ ಶಾಕ್ಯಾ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖೇಶ್ ವರ್ಮಾ ಶಿಕೋಹಾಬಾದ್ನಿಂದ ಶಾಸಕರಾಗಿದ್ದರೆ, ವಿನಯ್ ಶಾಕ್ಯ ಅವರು ಔರೈಯಾ ಅವರ ಬಿದುನಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಕಳೆದ 3 ದಿನಗಳಲ್ಲಿ 10 ಬಿಜೆಪಿ ಶಾಸಕರು ರಾಜೀನಾಮೆ ನೀಡಿ ಎಸ್ ಪಿ, ಬಿ ಎಸ್ ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಒಂದೆಡೆ ಪಕ್ಷದ ಸಚಿವರು ಶಾಸಕರು ರಾಜಿನಾಮೆ ನೀಡುತ್ತಿರುವ ಬೆನ್ನಲ್ಲೆ, ಯುಪಿಯಲ್ಲಿ ಬಿಜೆಪಿ, ಅಪ್ನಾ ದಳ ಮತ್ತು ನಿಶಾದ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ನಾಳೆ ಮೈತ್ರಿ ಘೋಷಣೆ ಮಾಡಲಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ, ಸೀಟು ಹಂಚಿಕೆ ಒಪ್ಪಂದಕ್ಕೆ ಬರಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸಭೆಯಲ್ಲಿ ಅಪ್ನಾ ದಳ ಮತ್ತು ನಿಶಾದ್ ಪಕ್ಷಕ್ಕೆ 15 ರಿಂದ 17 ಸ್ಥಾನಗಳನ್ನು ನೀಡಲು ಒಪ್ಪಿಗೆ ನೀಡಲಾಗಿದೆ. ನಾಳೆ ಲಕ್ನೋದಲ್ಲಿ ಮೈತ್ರಿ ಘೋಷಣೆಯಾಗಬಹುದು.
ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಅಮಿತ್ ಶಾ, ಅನುರಾಗ್ ಠಾಕೂರ್ ಮತ್ತು ಸ್ವತಂತ್ರ ದೇವ್ ಸಿಂಗ್ ಉಪಸ್ಥಿತರಿದ್ದರು. ಇದಲ್ಲದೇ ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಮತ್ತು ಧರ್ಮೇಂದ್ರ ಪ್ರಧಾನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.