ಆನೆ ತಜ್ಞ, ಪರಿಸರ ವಿಜ್ಞಾನಿ, ಅಡವಿ ಪ್ರೇಮಿ ಅಜಯ್ ದೇಸಾಯಿ ಎಂಬ ಪ್ರಕೃತಿ ಆರಾಧಕ ಇನ್ನು ಕೇವಲ ನೆನಪು ಮಾತ್ರ: wildlife experts Ajay Desai
ಬೆಳಗಾವಿ, ನವೆಂಬರ್21: ಆನೆಗಳ ಕುರಿತು ಮಹತ್ವಪೂರ್ಣ ಅಧ್ಯಯನ ನಡೆಸಿ, ವನ್ಯಜೀವಿಗಳ ಕುರಿತು ಅಪಾರ ಕಾಳಜಿ ಹೊಂದಿದ್ದ ಕನ್ನಡಿಗ ಅಜಯ್ ಎ.ದೇಸಾಯಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಮಗ್ರ ವನ್ಯಜೀವಿ ಹೋರಾಟ, ಸುಸ್ಥಿರ ಪರಿಸರ ಚಳುವಳಿ, ಆನೆ ಕಾರಿಡಾರ್, ಪ್ರಾಜೆಕ್ಟ್ ಎಲಿಫೆಂಟ್, ಡಿಸ್ಕವರಿ ವಿಲೇಜ್ ಇತ್ಯಾದಿ ಪರಿಕಲ್ಪನೆಗಳ ಹರಿಕಾರರೆಂದೇ ಗುರುತಿಸಿಕೊಂಡಿದ್ದ ಅಜಯ್ ದೇಸಾಯಿಯವರು ಏಷ್ಯಾದ ಪ್ರಮುಖ ಮತ್ತು ಪ್ರಸಿದ್ಧ ವೈಲ್ಡ್ ಲೈಫ್ ಆಕ್ಟಿವಿಸ್ಟ್ ಎಂದು ಗುರುತಿಸಿಕೊಂಡಿದ್ದವರು. ಸದ್ಯ ಬೆಳಗಾವಿಯಲ್ಲಿ ವಾಸವಿದ್ದ 62 ವರ್ಷದ ಅಜಯ್ ದೇಸಾಯಿ ತಮ್ಮ ಸ್ವಗೃಹದಲ್ಲೇ ತೀವ್ರ ಹೃದಯಾಘಾತದಿಂದ ಇಹದ ವ್ಯಾಪಾರ ಮುಗಿಸಿದ್ದಾರೆ. wildlife experts Ajay Desai

ಬಾಗಲಕೋಟೆ ಜಿಲ್ಲೆಯ ಕೊಣ್ಣೂರು ಇವರ ಹುಟ್ಟೂರು. ಧಾರವಾಡ ವಿವಿಯಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದ ಅವರು ಅಮೆರಿಕದ ಸ್ಮಿತ್ ಸೋನಿಯನ್ ಸಂಸ್ಥೆಯಲ್ಲಿ ವನ್ಯಜೀವಿ ತರಬೇತಿ ಪಡೆದಿದ್ದರು. ದೇಶದ ಹಲವು ಕಾಡುಗಳ ಬಗ್ಗೆ ಅಪಾರವಾದ ಅನುಭವ ಹೊಂದಿದ್ದ ಅಜಯ್ ದೇಸಾಯಿಯವರ ನೆಚ್ಚಿನ ಕ್ಷೇತ್ರ ಆನೆಗಳ ಬದುಕು, ವರ್ತನೆ ಮತ್ತು ವಲಸೆ ಮಾರ್ಗ. ಹಿಂದೆ ಛತ್ತೀಸ್ ಘಡ ಸರ್ಕಾರ ಆನೆ ಹಾವಳಿಯಿಂದ ಬೇಸತ್ತು ಕೊನೆಗೆ ಅಜಯ್ ದೇಸಾಯಿಯವರನ್ನು ಸಂಪರ್ಕಿಸಿ ವರದಿ ಪಡೆದುಕೊಂಡಿತ್ತು. ಕೇವಲ 20 ದಿನಗಳಲ್ಲೆ ಅಲ್ಲಿನ ಆನೆಕಾಟದ ಅಸಲಿ ಕಾರಣ ಸಹಿತ ವರದಿ ಸಲ್ಲಿಸಿದ್ದರು ಅವರು.
ವಿಶ್ವ ವನ್ಯಜೀವಿ ನಿಧಿ (ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಎಂಡ್ ನೇಚರ್) ಸಲಹೆಗಾರರಾಗಿ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟದ ಸದಸ್ಯರಾಗಿ, ಏಷ್ಯಾ ಆನೆಗಳ ತಜ್ಞರ ಗುಂಪಿನ ಸಹ ಅಧ್ಯಕ್ಷರು ಆಗಿದ್ದ ಇವರು ಭಾರತ ಸರ್ಕಾರದ ಆನೆ ಯೋಜನೆಯ ಸಲಹೆಗಾರರಾಗಿ ಕೇಂದ್ರ ವಿಜ್ಞಾನ ಪರಿಸರ ಮತ್ತು ಅರಣ್ಯ ಇಲಾಖೆಯ ಮಾರ್ಗದರ್ಶಕರೂ ಸಹ ಆಗಿದ್ದರು. ಪಶ್ಚಿಮ ಘಟ್ಟಗಳ ಉಳಿವಿನ ಕುರಿತಾಗಿ ಅಪಾರ ಕಳಕಳಿ ಹೊಂದಿದ್ದ ಅವರು ಈ ಕುರಿತಾಗಿ ಅನೇಕ ಉಪನ್ಯಾಸಗಳನ್ನೂ ನೀಡಿದ್ದರು. ಜೊತೆಗೆ ಆನೇ ಕಾರಿಡಾರ್ ರಕ್ಷಣೆಯ ಕುರಿತಾಗಿಯೂ ಸಾಕಷ್ಟು ವಾದ ಸರಣಿ ಮಂಡಿಸಿದ್ದರು.
ಹೇರ್ ಕಟಿಂಗ್ ಮಾಡಿದ್ದಕ್ಕೆ ಸಾಮಾಜಿಕ ಬಹಿಷ್ಕಾರ: ಆತ್ಮಹತ್ಯೆಗೆ ನಿರ್ಧರಿಸಿತಾ ಕ್ಷೌರಿಕ ಕುಟುಂಬ..!
ಪರಿಸರ ಸಂರಕ್ಷಣೆ, ಆನೆಗಳ ಸಂರಕ್ಷಣೆಯ ಕುರಿತು ಅವರು ನಡೆಸಿದ ಅಧ್ಯಯನ ಹಲವಾರು ನೂತನ ಉಪಯುಕ್ತ, ಮಾರ್ಗದರ್ಶನವನ್ನು ಒಳಗೊಂಡಿತ್ತು. ಶ್ರೀಲಂಕಾ, ಕಾಂಬೋಡಿಯ, ವಿಯೆಟ್ನಾಂ, ಇಂಡೋನೇಷ್ಯಾ, ಭೂತಾನ್, ನೇಪಾಳ, ಲಾವೋಸ್, ಮಲೇಷಿಯಾ ದೇಶಗಳು ವನ್ಯಜೀವಿ ಸಂರಕ್ಷಣೆಯ ಇವರ ಅನುಭವದ ಪ್ರಯೋಜನವನ್ನು ಪಡೆದ ದೇಶಗಳಾಗಿದ್ದವು.
ಇತರ ವಿಜ್ಞಾನಿಗಳಂತಲ್ಲದೆ ಪರಿಸರ ಸಂರಕ್ಷಣೆಯೊಂದಿಗೆ ಕಾಡಿನ ಆದಿವಾಸಿಗಳ ಬದುಕನ್ನು ನೇರ್ಪಡಿಸುವ ಮಹತ್ತರ ಯೋಜನೆಗಳನ್ನು ಹಮ್ಮಿಕೊಂಡಿದ್ದ ಅಪರೂಪದ ವಿಜ್ಞಾನಿ ಇವರಾಗಿದ್ದರು.

ಇವರ ದೂರದರ್ಶಿತ್ವ, ಆಳವಾದ ಅಧ್ಯಯನ, ಸದಾ ಹೊಸತರ ಹುಡುಕಾಟದಲ್ಲಿ ಅನ್ವೇಷಣೆಯಲ್ಲಿ ತೊಡಗಿರುತ್ತಿದ್ದ ಇವರ ನಿರ್ಗಮನ ವನ್ಯಜೀವಿಗಳ ಅದರಲ್ಲೂ ಪ್ರಮುಖವಾಗಿ ಆನೆಗಳ ಸಂಕುಲಕ್ಕೆ ತುಂಬಲಾರದ ನಷ್ಟವೆಂಬುದು ಸರ್ವ ವಿದಿತ. ಕಾಡಿನ ಸಂರಕ್ಷಣೆ ಎಂದರೆ ಕಾನೂನು ಕಟ್ಟಳೆಗಳಿಂದ ಕಾಡಿನ ರಕ್ಷಣೆಯಲ್ಲ, ಬದಲಾಗಿ ಕಾಡಿನ ಜೀವ ಸಂಕುಲವನ್ನು ಉಳಿಸಿ ಬೆಳೆಸುವುದೇ ನಿಜವಾದ ಸಂರಕ್ಷಣೆ ಎಂದು ನಂಬಿದವರು ಅಜಯ್ ದೇಸಾಯಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1329830459920957440?s=19
https://twitter.com/SaakshaTv/status/1329830879460352001?s=19








