ಕನ್ನಡಿ ಒರೆಸುವುದರಲ್ಲಿ ಜೀವನ ಕಳೆದೆ.. ಧೂಳು ನನ್ನ ಮುಖದ ಮೇಲೆಯೇ ಇತ್ತು… Aaruva deepakke bembalada belaku2
ಕಾರ್ಮೋಡ ಕರಗಿ ಭುವಿಯಲ್ಲಿ ಇಳೆ ನರ್ತಿಸುತ್ತಿತ್ತು. ಗುಡುಗು ಮಿಂಚಿನ ಆರ್ಭಟಕ್ಕೆ ಮರಗಿಡಗಳು ಭಯದಲ್ಲಿ ನಿಂತಲ್ಲೇ ಓಡಲು ಪ್ರಯತ್ನಿಸುತ್ತಲೇ ಇದ್ದವು.ತರಗೆಲೆಗಳು,ಕಸಕಡ್ಡಿಗಳು ಗಾಳಿಯ ಮೋಹಕ್ಕೆ ಸಿಲುಕಿ ಅದರೊಂದಿಗೆ ಹೆಜ್ಜೆ ಹಾಕಿದ್ದವು…
ಹೌದು.. ಅದೊಂದು ಸಂಜೆ ನಾನು ಕಾನನ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮೂರಿನ ಆದರ್ಶ ವ್ಯಕ್ತಿ ಸೀತಾರಾಮ ಹೆಬ್ಬಾರ್ ಅವರೊಂದಿಗೆ ಮನೆಯತ್ತ ಧಾವಿಸುತ್ತಿದ್ದೆ. ಜೋರಾಗಿ ಸುರಿವ ಮಳೆಗೆ ನಾನು ಛತ್ರಿ ತಂದಿಲ್ಲ ಎಂಬುದು ಹೇಗೆ ಅರಿವಾಗುವುದು..? .. Aaruva deepakke bembalada belaku2

ಉಪಾಯವಿಲ್ಲದೆ ಬೈಕ್ ನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕಾಪೋಳಿಯ ಪುಟ್ಟ ಬಸ್ಸ್ಟ್ಯಾಂಡ್ ಗೆ ಹೆಜ್ಜೆ ಇಟ್ಟೆವು… ಕೈಯಲ್ಲಿದ್ದ ಪ್ರಮಾಣಪತ್ರ ಪುಸ್ತಕಗಳು ಮಳೆಹನಿ ಅಂಟಿದ ನೋವಿಗೆ ಅಳುತ್ತಿದ್ದವು. ಇನ್ನೇನು ಕತ್ತಲೆಯಾಗುತ್ತಿದೆ ಮನೆಗೆ ಹೋಗುವುದಾದರೂ ಹೇಗೆ ಈ ಮಳೆಗೆ… ದೇವರೇ ಒಮ್ಮೆ ಮಳೆಯನ್ನ ನಿಲ್ಲಿಸು.. ಎಂದು ಮನದಲ್ಲೇ ನೂರು ಬಾರಿ ಪ್ರಾರ್ಥಿಸುತ್ತಿದ್ದೆ. ಯಾವುದಾದರು ವಾಹನ ನಿಲ್ಲಿಸಿ ಹೋಗೋಣ ಎಂದರೂ ಒಂದೇ ಒಂದು ವಾಹನದ ಸುಳಿವಿಲ್ಲ. ದಿಕ್ಕೇ ತೋಚದೆ ಕೈ ಕಟ್ಟಿ ಬಸ್ಸ್ಟ್ಯಾಂಡ್ ಮೂಲೆಯಲ್ಲಿ ಮಂಕಾಗಿ ನಿಂತಿದ್ದೆ.
ನನ್ನೊಂದಿಗಿದ್ದಿದ್ದು ಸಾಮಾನ್ಯ ವ್ಯಕ್ತಿಯಲ್ಲ. ಜ್ಞಾನದಲ್ಲಿ ವಿಚಾರವಂತ, ಭಾಗವತಿಕೆಯಲ್ಲಿ ಪ್ರವೀಣ, ಮಾತಿನಲ್ಲಿ ಅರಸ , ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್.. ಅವರ ಜೀವನ ಅನುಭವಗಳನ್ನು ಹೇಳುತ್ತಾ ನನ್ನೊಳಗಿನ ನನ್ನನ್ನು ತೆರೆದಿಡಲು ವ್ಯಕ್ತಿತ್ವದ ಅರಿವನ್ನು ಮಾತಿನಲ್ಲಿ ಪಸರಿಸುತ್ತಿದ್ದರು.. ಅವರ ಮಾತುಗಳನ್ನು ಶಿಷ್ಯೆಯಂತೆ ಆಲಿಸುತ್ತಿದ್ದರೂ ಗುಡುಗಿನ ಶಬ್ದವನ್ನು ಕೇಳಲಾಗದೆ ಕಿವಿ ಮುಚ್ಚಿಕೊಂಡೆ..
ಅಯ್ಯೋ…ಸ್ವಲ್ಪ ಹೊತ್ತು ಬಿಟ್ಟು ಮಳೆ ಬಂದಿದ್ದರು ಪರಿವಾಗಿರ್ಲಿಲ್ಲ.. ಮನೆಗೆ ತಲುಪುತ್ತಿದ್ದೆವು.. ಮಳೆಗೂ ಹೊಟ್ಟೆಕಿಚ್ಚೆ ಇರಬೇಕು ಎಂದೆಲ್ಲಾ ಮನದಲ್ಲೇ ಬೈಯುತಿದ್ದೆ.
ಅಷ್ಟರಲ್ಲಿ ನಮ್ಮೂರಿನ ಇಬ್ಬರು ಮಳೆಯಲ್ಲಿ ಒದ್ದೆಯಾಗುತ್ತಾ ಬಸ್ಸ್ಟ್ಯಾಂಡ್ ಒಳಗೆ ಹೆಜ್ಜೆ ಇಟ್ಟರು. ಹಿರಿಯರಿಗೆ ನಮಸ್ಕರಿಸುತ್ತಾ ಮಾತಿನ ಕಟ್ಟೆಯಲ್ಲಿ ಕುಳಿತರು. ಗಾಳಿಯ ರಭಸಕ್ಕೆ ಬಸ್ಸ್ಟ್ಯಾಂಡ್ ಕೊಟ್ಟಿಗೆ ಯಂತೆ ಕಂಗೊಳಿಸುತ್ತಿತ್ತು. ತರಗೆಲೆಗಳ ರಾಶಿ ನೆಲದ ಮೇಲೆ ಹರಡಿ ಅಲಂಕಾರ ಮಾಡಿತ್ತು. ಧೂಳು, ಕೆಸರು ಮಣ್ಣು ಕುಳಿತವರ ಪಂಚೆ ಮೇಲೆ ಅಂಟಿ ಪಂಚೆಯ ಬಣ್ಣವನ್ನು ಬದಲಿಸಿತ್ತು. ಇವೆಲ್ಲವನ್ನೂ ಗಮನಿಸಿದರೂ ಮೂಕಳಾಗಿ ನಿಂತ ನನಗೆ ವ್ಯಕ್ತಿತ್ವದ ಪಾಠ ಕಲಿಸಿದ್ದು.. ನನ್ನ ಗುರುಗಳೇ.. ಹೌದು….
ನಾನು ಕುಳಿತವರನ್ನು ಎಬ್ಬಿಸಿ, ಅಲ್ಲಿ ಧೂಳಿದೆ ಎದ್ದೇಳಿ ಎಂದೆ. ಕುಳಿತವರು ಮಣ್ಣಿನೊಂದಿಗೆ ಭಾಂದವ್ಯವ ಬೆಸೆದ ಕಾರ್ಮಿಕರು. ಅವರಿಗೇನೂ ಧೂಳು ಹಿಡಿದಿದ್ದು ಹಿಂಸೆ ಅನ್ನಿಸಲೇ ಇಲ್ಲ.. ಇರ್ಲಿ ಬಿಡಮ್ಮ… ಎಂದು ಮತ್ತೆ ಅಲ್ಲೇ ಕುಳಿತರು.
ಅಷ್ಟರಲ್ಲಿ ಒಂದು ಕ್ಷಣವೂ ಯೋಚಿಸದೆ ಸೀತಾರಾಮ ಹೆಬ್ಬಾರ್ ಅವರು ತನ್ನ ಕೈಯಲ್ಲೇ ನೆಲದ ಮೇಲೆ ಹರಡಿದ್ದ ತರಗೆಲೆ, ಕಸಕಡ್ಡಿಗಳನ್ನು ಸರಿಸತೊಡಗಿದರು..ಇಡೀ ಬಸ್ಸ್ಟ್ಯಾಂಡ್ ನ್ನು ಅಂತಹ ಸಾಧಕ ತನ್ನ ಬೆರಳುಗಳನ್ನೇ ಬಳಸಿ ಶುಭ್ರಗೊಳಿಸಿದ್ದು ಅಚ್ಚರಿಯಾಗಿ ಕಂಡರೂ ನಾನು, ಮತ್ತಿಬ್ಬರು ಅವರ ಕೆಲಸವನ್ನು ಕಣ್ಣು ಮಿಟಿಕಿಸುತ್ತ ನೋಡುತಿದ್ದೆವಷ್ಟೆ.. ಅಷ್ಟರಲ್ಲಿ ಓರ್ವ ” ಇರ್ಲಿ ಸರ್, ನೀವ್ಯಾಕೆ ಸ್ವಚ್ಛ ಮಾಡ್ತೀರಿ. ದಿನಾ ಹೀಗೆಯೇ ಇರುತ್ತೆ ” ಎಂದರು. ಹೆಬ್ಬಾರರು ಮುಗುಳ್ನಗುತ್ತ ಏನನ್ನೂ ಉತ್ತರಿಸದೆ ತನ್ನ ವಸ್ತ್ರವನ್ನು ಒದ್ದೆ ಮಾಡಿ ಇಡೀ ಬಸ್ಸ್ಟ್ಯಾಂಡ್ ನ್ನು ಎರಡು ಮೂರು ಬಾರಿ ಒರೆಸಿ ಕೊಟ್ಟಿಗೆಯಂತಿದ್ದ ಬಸ್ಸ್ಟ್ಯಾಂಡ್ ನ್ನು ಗುಡಿಯಂತೆ ಬೆಳಗಿಸಿದರು. ಆಗಲೇ ನನಗೆ ಅರಿವಾಗಿದ್ದು.. ” ಕನ್ನಡಿ ಒರೆಸುವುದರಲ್ಲಿ ಜೀವನ ಕಳೆದೆ, ಧೂಳು ನನ್ನ ಮುಖದ ಮೇಲೆಯೇ ಇತ್ತು ” ಎಂದು.

ಇದರರ್ಥ. ಹಿಡಿವ ಧೂಳಿನಿಂದ ಪಾರಾಗಲು ಹೇಳಿದ ನನಗೆ ಧೂಳೇ ಹಿಡಿಯದೇ ಕುಳಿತುಕೊಳ್ಳುವಂತೆ ಮಾಡುವ ಸಾಮರ್ಥ್ಯ ಇದ್ದರೂ ಮೌನಿಯಾಗಿ ನಿಂತಿದ್ದ ನನಗೆ ಸ್ವಚ್ಛತೆಯ ಅರಿವು ಮೂಡಿಸಿ ವ್ಯಕ್ತಿತ್ವ ಪಾಠವನ್ನು ಕಲಿಸಿದ ಗುರು ಸೀತಾರಾಮ ಹೆಬ್ಬಾರ್..
ನಿಮಗೆಲ್ಲ ಸಣ್ಣ ವಿಚಾರವಾಗಿ ಕಂಡರೂ ನನಗದು ತಾಯಿಯ ಗರ್ಭದಿ ಬೆಳೆದು ಈ ಲೋಕಕ್ಕೆ ಕಾಲಿಟ್ಟ ಗಳಿಗೆಯಷ್ಟೇ ಹಿರಿದು.
ನಿಮಗೂ ಈ ಘಟನೆ ಒಂದು ಸುಂದರ ಸಂದೇಶ ನೀಡಿದೆ..
ಬದುಕಿನಲ್ಲಿ ಯಶಸ್ಸು, ಕೀರ್ತಿ,ಗೌರವ ಎಲ್ಲಾ ಗಳಿಸಿದರೂ ನೀವು ಶ್ರೇಷ್ಟರಾಗುವುದು ನಿಮ್ಮ ಸುಂದರ ವ್ಯಕ್ತಿತ್ವದಿಂದಲೇ. ಹಣ, ಹೆಸರು ದೊಡ್ಡದಲ್ಲ… ಬಡವರ್ಗದ ಹೆಣ್ಣೊಬ್ಬಳು ತನ್ನೆದುರಿಗೆ ಕೀರ್ತಿ ಪಡೆದರೆ ಗುರುವೇ ಹೊಟ್ಟೆಕಿಚ್ಚು ಪಡುತ್ತಾ ಶಿಷ್ಯೆಯ ದೂರುವ ಕಾಲವಿದು. ಅಂತದ್ದರಲ್ಲಿ ಈ ಒಂದು ದೃಶ್ಯ ನನಗೆ ಹೃದಯ ಮುಟ್ಟಿತು.
ಮನುಷ್ಯನಲ್ಲಿ ನರಿಯ ಕುತಂತ್ರ, ಮಂಗನ ಚೇಷ್ಟೆ ಬೆರೆತು ಹೋಗಿದೆ. ನಮ್ಮ ಪ್ರಕಾರ ನಾವೇ ಸರಿ. ಪ್ರತಿ ತಪ್ಪುಗಳಿಗೂ ಇನ್ನೊಬ್ಬರನ್ನು ದೂರಲು ನಮ್ಮ ಬೆರಳು ಸಿದ್ದ.ಆದರೆ ಉಳಿದ ಬೆರಳುಗಳು ನಮ್ಮನ್ನೇ ತೋರಿಸುತ್ತವೆ ಎಂಬುದು ತಿಳಿದೇ ಇಲ್ಲ.

ನಮಗೆ ಇತರರ ಬಗ್ಗೆ ಒಂದು ಭಾವ ಮೂಡಬೇಕಾದರೆ ಅಥವಾ ಇನ್ನೊಬ್ಬರನ್ನು ದೂಷಿಸಿದರೆ ಆ “ದೂಷಿಸುವ ಗುಣ ” ವೂ ನನ್ನೊಳಿಗಿನ ನನ್ನಲ್ಲೇ ಹುಟ್ಟಿರುತ್ತದೆ..ಅಲ್ವಾ..
ಸದಾ ಈ ಸಮಾಜಕ್ಕೆ ದಾರಿದೀಪವಾಗುವ ವಿಚಾರಗಳನ್ನೇ ಚಿಂತಿಸೋಣ…. ನಾಲ್ಕು ದಿನದ ಜೀವನದಲ್ಲಿ ಕಾಮ, ಕ್ರೋದ, ಮದ, ಮತ್ಸರಗಳಲ್ಲೇ ಜೀವನ ವ್ಯರ್ಥ ಮಾಡುವ ಜನರೊಮ್ಮೆ ಹಿಂತಿರುಗಿ ನೋಡಿ…ಗಳಿಸಬೇಕಾಗಿದ್ದು, ಮಾಡುವ ಕೆಲಸ, ಕಲಿಯುವ ಪಾಠ ಸಾಗರದಷ್ಟಿದೆ…. ಸಜ್ಜನರಾಗಿ ಹೆಜ್ಜೆ ಇಡಿ. ಬಡವ ಬಲ್ಲಿದ ನನ್ನು ಸಮನಾಗಿ ಗೌರವಿಸಿ… ನೆನಪಿಡಿ. ನಿಮ್ಮ ವ್ಯಕ್ತಿತ್ವವೇ ನಿಮ್ಮ ಕೈಗನ್ನಡಿ.
ಕನ್ನಡಿಯ ಧೂಳ ಒರೆಸುವ ಮೊದಲು ಮುಖದ ಮೇಲಿನ ಧೂಳನ್ನು ಒರೆಸಿಕೊಳ್ಳಿ…
ಇಂತಿ ನಿಮ್ಮ ಪ್ರೀತಿಯ..
ಚೈತ್ರ ಕಬ್ಬಿನಾಲೆ ✍️✍️✍️
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹೆಬ್ರಿ ಘಟಕದ ಸಂಚಾಲಕಿ
ಸಾಕ್ಷಾ ಟಿವಿಯ ಆರುವ ದೀಪಕ್ಕೆ ಬೆಂಬಲದ ಬೆಳಕು – ಅಂಕಣಕಾರರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








