ನಟ ದರ್ಶನ್ ಅವರು ಹುಟ್ಟು ಹಬ್ಬ ಇರುವ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದಲೇ ಅವರ ಮನೆ ಎದುರು ಅಭಿಮಾನಿಗಳು ಸಾಗರದಂತೆ ಹರಿದು ಬರುತ್ತಿದ್ದಾರೆ.
ಬೆಂಗಳೂರಿನ ಆರ್.ಆರ್ ನಗರದಲ್ಲಿರುವ ದರ್ಶನ್ ನಿವಾಸದ ಎದುರು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಶುಭ ಕೋರುತ್ತಿದ್ದಾರೆ. ದರ್ಶನ್ ಮನೆ ಸುತ್ತ ಸುಮಾರು 2 ಕಿಮೀ ಹಿಂದಿನಿಂದ ಅಭಿಮಾನಿಗಳು ಇದ್ದು, ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದಾರೆ. ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಬೆಳಗ್ಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಂಡು ಮತ್ತೆ 9.30 ರ ನಂತರ ಸೆಲೆಬ್ರಿಟಿಗಳೊಂದಿಗೆ ಆಚರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅಭಿಮಾನಿಗಳು, ಚಿತ್ರೋದ್ಯಮ ಅನೇಕ ಗಣ್ಯರು ಕೂಡ ದರ್ಶನ್ ಮನೆಗೆ ಆಗಮಿಸಿ ಶುಭಾಶಯ ಕೋರಿದ್ದಾರೆ. ಕಾಟೇರಾ ನಿರ್ದೇಶಕ ತರುಣ್ ಸುಧೀರ್, ನಟರಾದ ಪ್ರಜ್ವಲ್, ಚಿಕ್ಕಣ್ಣ, ವಿನೋದ್ ಪ್ರಭಾಕರ್, ಧನ್ವೀರ್, ಝನೈದ್ ಖಾನ್, ಅಭಿಷೇಕ್ ಅಂಬರೀಶ್ ಸೇರಿದಂತೆ ಹಲವರು ಶುಭಾಶಯ ತಿಳಿಸಿದ್ದಾರೆ.