ತಮ್ಮ ಕುರಿತು ಹಗುರುವಾಗಿ ಮಾತನಾಡಿರುವ ತಮಿಳಿನ ಖ್ಯಾತ ರಾಜಕಾರಣಿ ಎ.ವಿ.ರಾಜು ಅವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ಇಂತಹ ಕೊಳಕು ಮನಸ್ಥಿತಿಗೆ ಬುದ್ಧಿ ಕಲಿಸಬೇಕು ಎಂದು ನಟಿ ತ್ರಿಶಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್ ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಮುಖಂಡ ಎ.ವಿ.ರಾಜು ಅಸಂಬದ್ಧ ಹೇಳಿಕೆ ನೀಡಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಸಿನಿಮಾ ರಂಗದ ಹಲವರು ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ನಟಿ ತ್ರಿಶಾ ಕೂಡ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಾಜು ಕ್ಷಮೆ ಕೇಳಿದ್ದಾರೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ತ್ರಿಶಾ ರೀತಿಯ ನಟಿಯನ್ನು ಎಂದು ಹೇಳಿದ್ದು, ತ್ರಿಶಾ ಅವರನ್ನೇ ಅಂತ ಹೇಳಿಲ್ಲ. ಆದರೂ, ನಾನು ಕ್ಷಮೆ ಕೇಳುತ್ತೇನೆ. ಯಾರಿಗೂ ನೋಯಿಸುವ ಉದ್ಧೇಶ ನನಗೆ ಇಲ್ಲ ಎಂದು ಹೇಳಿದ್ದಾರೆ.
ಆದರೆ, ಪದೇ ಪದೇ ನಟಿ ತ್ರಿಶಾ ಅವರ ಮೇಲೆ ಮಾನಹಾನಿ ಮಾಡುವಂತಹ ಘಟನೆಗಳು ತಮಿಳುನಾಡಿನಲ್ಲಿ ನಡೆಯುತ್ತಲೇ ಇವೆ. ಇತ್ತೀಚೆಗಷ್ಟೇ ಮನ್ಸೂರ್ ಅಲಿ ಖಾನ್ ಕೂಡ ತ್ರಿಶಾ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದ. ಈಗ ರಾಜು ಮಾತನಾಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಲೈಂಗಿಕ ಕೆಲಸಕ್ಕಾಗಿ ಎ.ವೆಂಕಟಾಚಲಂ ಅವರು ತ್ರಿಶಾರಿಗೆ 25 ಲಕ್ಷ ರೂಪಾಯಿ ಆಫರ್ ನೀಡಿದ್ದರು. ಶಾಸಕರೊಬ್ಬರು ಅದಕ್ಕೆ ಒಪ್ಪಿಸಿದ್ದರು ಎಂದು ರಾಜು ಹೇಳಿದ್ದರು. ಇಂತಹ ಅನೇಕ ನಟಿಯರು ನಮ್ಮಲ್ಲಿ ಇದ್ದಾರೆ ಎಂದು ರಾಜು ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇವರಿಗೆ ನಮ್ಮ ಲೀಗಲ್ ಟೀಮ್ ತಕ್ಕ ಪಾಠ ಕಲಿಸುತ್ತದೆ ಎಂದು ತ್ರಿಶಾ ಹೇಳಿದ್ದಾರೆ.