ಹಿರಿಯ ನಟ ದ್ವಾರಕೀಶ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 12ರ ವರೆಗೆ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರ ಅಂತಿಮ ದರ್ಶನದ ನಂತರ ಮಧ್ಯಾಹ್ನ ಚಾಮರಾಜಪೇಟೆಯಲ್ಲಿರುವ ಟಿ.ಆರ್ ಮಿಲ್ ನಲ್ಲಿ ದ್ವಾರಕೀಶ್ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಪುತ್ರ ಯೋಗೀಶ್ ಹೇಳಿದ್ದಾರೆ. ದ್ವಾರಕೀಶ್ ಮಂಗಳವಾರ ಮನೆಯಲ್ಲಿ ಮಲಗಿದ್ದ ವೇಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 81ನೇ ವರ್ಷದಲ್ಲಿ ಚಂದನವನದ ಹಿರಿಯ ನಟ ಇಹಲೋಕ ತ್ಯಜಿಸಿದ್ದಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ನಟ, ನಿರ್ದೇಶಕ, ನಿರ್ಮಾಪಕ, ಕಥೆಗಾರನಾಗಿ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದರ ಅಗಲಿಕೆ ಚಂದನವನಕ್ಕೆ ಭಾರೀ ನಷ್ಟವಾಗುವಂತೆ ಮಾಡಿದೆ. ಹಿರಿಯ ನಟರ ಅಗಲಿಕೆಯ ಹಿನ್ನೆಲೆಯಲ್ಲಿ ವಿವಿಧ ರಂಗದ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸ್ನೇಹಿತ ಅಗಲಿದ್ದಕ್ಕೆ ಕಂಬನಿ ಮಿಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀ ನೋವನ್ನು ತಂದಿದೆ. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ, ಆನಂತರ ದೊಡ್ಡ ನಿರ್ಮಾಪಕರು ಹಾಗೂ ನಿರ್ದೇಶಕರಾಗಿ ಬೆಳೆದರು ಹಾಗೂ ಬೆಳೆಸಿದರು. ಅವರ ಅಗಲಿಕೆ ನೋವು ತಂದಿದೆ. ಅವರಿಗೆ ಭಾವ ಪೂರ್ಣ ಸಂತಾಪ ಎಂದು ವಿಷಾಧಿಸಿದ್ದಾರೆ.