ಬೆಂಗಳೂರು: ಸ್ಯಾಂಡಲ್ವುಡ್ ಸಲಗ ಖ್ಯಾತಿಯ ದುನಿಯಾ ವಿಜಯ್ ಅಭಿನಯದ ಹಾಗೂ ನಿರ್ದೇಶನದ ಬಹುನಿರೀಕ್ಷಿತ ಲ್ಯಾಂಡ್ಲಾರ್ಡ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಚಿತ್ರಕ್ಕೆ ಸರ್ಕಾರ ನೀಡಿದ ಕೊಡುಗೆಯೊಂದು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಕಳಕಳಿಯ ಸಿನಿಮಾ ಎಂಬ ಹಣೆಪಟ್ಟಿ ಹೊತ್ತಿರುವ ಈ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ವಿನಾಯ್ತಿ ಘೋಷಣೆ ಮಾಡಿದ್ದರು. ಆದರೆ ಈ ನಡೆಗೆ ಇದೀಗ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರದ ನಿರ್ಧಾರವನ್ನು ಪಕ್ಷಪಾತ ಎಂದು ಜರಿದಿದ್ದಾರೆ.
ಲ್ಯಾಂಡ್ಲಾರ್ಡ್ ಮತ್ತು ಸರ್ಕಾರದ ಕೊಡುಗೆ
ದುನಿಯಾ ವಿಜಯ್, ರಚಿತಾ ರಾಮ್ ಹಾಗೂ ವಿಜಯ್ ಪುತ್ರಿ ರಿತಾನ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಲ್ಯಾಂಡ್ಲಾರ್ಡ್ ಸಿನಿಮಾ ಜನವರಿ 23ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡಿತ್ತು. ಸಾಮಾಜಿಕ ಅಸಮಾನತೆ, ಜಾತಿ ಪದ್ಧತಿಯ ಶೋಷಣೆ ಹಾಗೂ ಸಮಾಜದ ನೈಜ ಚಿತ್ರಣವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಈ ಸಿನಿಮಾ ಮಾಡಿದೆ ಎಂದು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಹಾಗೂ ಚಿತ್ರತಂಡದ ಸದಸ್ಯರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿದ್ದರು. ಸಿನಿಮಾದಲ್ಲಿ ಅಡಗಿರುವ ಸಾಮಾಜಿಕ ಸಂದೇಶ ಹಾಗೂ ಆಶಯಗಳ ಬಗ್ಗೆ ಸಿಎಂ ಜತೆ ಸುದೀರ್ಘ ಚರ್ಚೆ ನಡೆಸಿದ್ದರು. ಚಿತ್ರದ ತಿರುಳು ಹಾಗೂ ಉದ್ದೇಶವನ್ನು ಮೆಚ್ಚಿದ ಮುಖ್ಯಮಂತ್ರಿಗಳು, ತಕ್ಷಣವೇ ಸ್ಪಂದಿಸಿ ಚಿತ್ರಕ್ಕೆ ಶೇಕಡಾ 100 ರಷ್ಟು ತೆರಿಗೆ ವಿನಾಯ್ತಿ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶ ನೀಡಿದ್ದರು. ಇದು ಸಹಜವಾಗಿಯೇ ಚಿತ್ರತಂಡಕ್ಕೆ ರಾಜ್ಯ ಸರ್ಕಾರದಿಂದ ಸಿಕ್ಕ ಬಹುದೊಡ್ಡ ಉಡುಗೊರೆಯಾಗಿತ್ತು.
ಚೇತನ್ ಅಹಿಂಸಾ ಆಕ್ರೋಶ
ಆದರೆ ಸರ್ಕಾರದ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿಲ್ಲ. ಸಾಮಾಜಿಕ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುವ ನಟ ಚೇತನ್ ಅಹಿಂಸಾ ಅವರು ಸರ್ಕಾರದ ಈ ನಡೆಯನ್ನು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧ ಎಂದು ಟೀಕಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿರುವ ಅವರು, ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಸಂಪರ್ಕ ಇರುವವರಿಗೆ ಮಾತ್ರ ಲಾಭವೇ?
ಚೇತನ್ ಅಹಿಂಸಾ ತಮ್ಮ ಪೋಸ್ಟ್ನಲ್ಲಿ, ಲ್ಯಾಂಡ್ಲಾರ್ಡ್ ಸಿನಿಮಾಗೆ ಕರ್ನಾಟಕ ಸರ್ಕಾರ ಶೇಕಡಾ 100 ರಷ್ಟು ತೆರಿಗೆ ವಿನಾಯ್ತಿ ನೀಡಿರುವುದು ಸ್ಪಷ್ಟವಾಗಿ ಪಕ್ಷಪಾತದ ಕ್ರಮವಾಗಿದೆ. ಇದು ತಮಗೆ ಬೇಕಾದವರನ್ನು ಅಥವಾ ಪ್ರಭಾವಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಮಾತ್ರ ಸರ್ಕಾರಿ ಸವಲತ್ತುಗಳನ್ನು ನೀಡುವ ತಂತ್ರದಂತಿದೆ. ಅಧಿಕಾರ ಮತ್ತು ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಲಾಭ ನೀಡುವುದು ಪ್ರಜಾಸತ್ತಾತ್ಮಕ ನ್ಯಾಯ ತತ್ವಕ್ಕೆ ಮತ್ತು ಸಮಾನತೆಯ ಆಶಯಕ್ಕೆ ಧಕ್ಕೆ ತರುತ್ತದೆ ಎಂದು ಕಿಡಿಕಾರಿದ್ದಾರೆ.
ಎಲ್ಲರಿಗೂ ಕೊಡಿ ಇಲ್ಲವೇ ಯಾರಿಗೂ ಬೇಡ
ಕೇವಲ ವಿರೋಧ ವ್ಯಕ್ತಪಡಿಸುವುದಷ್ಟೇ ಅಲ್ಲದೆ, ಚೇತನ್ ಅವರು ಸರ್ಕಾರದ ನೀತಿಯ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ಕೇವಲ ಒಂದು ಸಿನಿಮಾಗೆ ಏಕೆ ವಿನಾಯ್ತಿ? ರಾಜ್ಯದಲ್ಲಿ ಬರುವ ಬೇರೆ ಉತ್ತಮ ಚಿತ್ರಗಳು ಇದಕ್ಕೆ ಅರ್ಹವಲ್ಲವೇ? ಕಂಟೆಂಟ್ ಯಾವುದೇ ಆಗಿರಲಿ, ಒಂದೋ ಎಲ್ಲಾ ಸಿನಿಮಾಗಳಿಗೂ ತೆರಿಗೆ ವಿನಾಯ್ತಿ ನೀಡಬೇಕು, ಇಲ್ಲವೇ ಯಾವ ಸಿನಿಮಾಗೂ ನೀಡಬಾರದು. ಅದು ಬಿಟ್ಟು ಸಂಪರ್ಕ ಬಳಸಿಕೊಂಡು ಬಂದವರಿಗೆ ಮಣೆ ಹಾಕುವುದು ಸರಿಯಲ್ಲ ಎಂಬುದು ಚೇತನ್ ಅವರ ವಾದವಾಗಿದೆ.
ಮುಖ್ಯಮಂತ್ರಿಗಳ ಸಮರ್ಥನೆ ಏನು?
ದುನಿಯಾ ವಿಜಯ್ ಭೇಟಿಯ ನಂತರ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಸಾಮಾಜಿಕ ಅಸಮಾನತೆ ಮತ್ತು ಜಾತಿ ಆಧಾರಿತ ಶೋಷಣೆಯ ವಿಷಯವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಲು ಹಾಗೂ ಸಾಮಾಜಿಕ ಪರಿವರ್ತನೆಗೆ ಸಿನಿಮಾ ಪ್ರಬಲ ಮಾಧ್ಯಮವಾಗಿದೆ. ಇಂತಹ ಸಾಮಾಜಿಕ ಕಳಕಳಿಯ ಸಿನಿಮಾ ಮಾಡಿದವರ ಬೆನ್ನು ತಟ್ಟುವುದು ಸರ್ಕಾರದ ನೈತಿಕ ಹೊಣೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಚಿತ್ರಗಳು ಬರಲು ಈ ನಿರ್ಧಾರ ಸ್ಫೂರ್ತಿಯಾಗಲಿದೆ ಎಂದು ಸಿಎಂ ಹೇಳಿದ್ದರು.
ಒಟ್ಟಿನಲ್ಲಿ ಲ್ಯಾಂಡ್ಲಾರ್ಡ್ ಸಿನಿಮಾದ ಯಶಸ್ಸಿನ ನಡುವೆಯೇ ಈ ತೆರಿಗೆ ವಿನಾಯ್ತಿಯ ವಿಚಾರ ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರದ ಈ ನಡೆಯನ್ನು ಕೆಲವರು ಸ್ವಾಗತಿಸಿದರೆ, ಚೇತನ್ ಅವರಂತೆ ಇನ್ನೂ ಕೆಲವರು ಇದನ್ನು ತಾರತಮ್ಯದ ನೀತಿ ಎಂದು ವಿಶ್ಲೇಷಿಸುತ್ತಿದ್ದಾರೆ.








