ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಐಎಎಸ್ ಅಧಿಕಾರಿಯಾಗಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದ ಶಿವರಾಮ್ ಅವರು ಚಿತ್ರರಂಗ ಹಾಗೂ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದರು. 1993ರಲ್ಲಿ ತೆರೆಕಂಡ ಬಾ ನಲ್ಲ ಮಧು ಚಂದ್ರಕೆ ಚಿತ್ರದ ಮೂಲಕ ಅವರು ಬೆಳ್ಳಿ ತೆರೆ ಪ್ರವೇಶಿಸಿದ್ದರು. ಆ ಸಿನಿಮಾದ ಹಾಡುಗಳು ಇಂದಿಗೂ ಸೂಪರ್ ಹಿಟ್ ಆಗಿವೆ. ಹೀಗಾಗಿ ಎಲ್ಲ ರಂಗದವರು ಈಗ ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ.
ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರು, ಕೆಎಎಸ್ ಹಾಗೂ ಐಎಎಸ್ ಅಧಿಕಾರಿಯಾಗಿ ಸಾಧನೆ ಮಾಡಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಕನ್ನಡದಲ್ಲಿ ಬರೆದು ಐಎಎಸ್ ಆದ ಮೊದಲ ವ್ಯಕ್ತಿ ಆಗಿರುವ ಇವರು, ಸಿನಿಮಾ ಹೀರೋ ಆದ ಮೊದಲ ಐಎಎಸ್ ಅಧಿಕಾರಿ ಎಂಬ ಖ್ಯಾತಿ ಕೂಡ ಇವರದ್ದೇ ಆಗಿದೆ.
ಅಧಿಕಾರಿಯಾಗಿದ್ದುಕೊಂಡು ಸಿನಿಮಾದಲ್ಲಿ ನಟಿಸಬಾರದು ಎಂದು ಕೆಲವರು ತಕರಾರು ತೆಗೆದಿದ್ದರು. ಆದರೆ ಅದರ ವಿರುದ್ಧ ಶಿವರಾಮ್ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ನಟನೆ, ಕ್ರೀಡೆ ಇವೆಲ್ಲ ಹವ್ಯಾಸ. ಅದಕ್ಕೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಶಿವರಾಮ್ ವಾದಿಸುತ್ತಿದ್ದರು.
ನಿವೃತ್ತಿ ಹೊಂದುವ ತನಕವೂ ಅವರು ನಟನೆಯಲ್ಲಿ ತೊಡಗಿಕೊಂಡಿದ್ದರು. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಅವರು ಅಧಿಕಾರಿಯಾಗಿದ್ದರಿಂದಾಗಿ ಸರಿಯಾದ ಸಮಯಕ್ಕೆ ಕಾಲ್ ಶೀಟ್ ನೀಡುವುದಿಲ್ಲ ಎಂಬ ಕಾರಣಕ್ಕೆ ಚಿತ್ರರಂಗದಿಂದ ದೂರ ಸರಿಯಲು ಆರಂಭಿಸಿದರು. ಪ್ರತಿಭಟನೆ, ಖಳನಾಯಕ, ಯಾರಿಗೆ ಬೇಡ ದುಡ್ಡು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು 2017ರಲ್ಲಿ ಕೊನೆಯ ಸಿನಿಮಾದಲ್ಲಿ ನಟಿಸಿದ್ದಾರೆ.