ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಟ್ರೆಂಡ್ ಆಗಿದ್ದು, ರಾಹುಲಾ ಸ್ವಲ್ಪ ಅಲ್ಲಾಡ್ಸಪ್ಪ ಅಂತ. ಈ ಡೈಲಾಗ್ ಹೇಳಿದ ವ್ಯಕ್ತಿ ಬೆಳ್ಳುಳ್ಳಿ ಕಬಾಬ್ ಚಂದ್ರು. ಇವರ ‘ಬೆಳ್ಳುಳ್ಳಿ ಕಬಾಬ್’ ಈಗ ಸಖತ್ ವೈರಲ್ ಆಗಿದೆ. ಅದರಲ್ಲೂ ಚಂದ್ರು ಅವರು ಅಡುಗೆ ಮಾಡುವಾಗ ಹೇಳುವ ‘ಒನ್ಸ್ ಮೋರ್ ಒನ್ಸ್ ಮೋರ್’, ‘ಸ್ವಲ್ಪ ರುಬ್ಬಿಕೊಡಪ್ಪ ರಾಹುಲಾ’ ಡೈಲಾಗ್ ಗಳು ಸಖತ್ ಫೇಮಸ್ ಆಗಿವೆ. ಸದ್ಯ ಈ ಫೇಮಸ್ ಈಗ ಅವರನ್ನು ಬೆಳ್ಳಿ ತೆರೆಗೆ ಕರೆದುಕೊಂಡು ಹೋಗಿ ನಿಂತಿವೆ.
ಈ ಚಂದ್ರು ಸಿನಿಮಾರಂಗದಲ್ಲೇ ಕೆಲಸ ಮಾಡುತ್ತಿದ್ದವರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಹೌದು, ಮೂಲತಃ ಮೇಕಪ್ ಮ್ಯಾನ್ ಆಗಿದ್ದ ಚಂದ್ರು, ನಟಿ ಮಾಲಾಶ್ರೀ ಅವರ ಜೊತೆಗೂ ಕೆಲಸ ಮಾಡಿದ್ದಾರೆ. ಅಣ್ಣಾವ್ರ ಕುಟುಂಬದ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಚಂದ್ರು, ಸದ್ಯ ‘ಬೆಳ್ಳುಳ್ಳಿ ಕಬಾಬ್’ ಮೂಲಕ ವೈರಲ್ ಆಗಿದ್ದಾರೆ. ಈಗ ಸವಿರುಚಿ ಅಡುಗೆ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ತನ್ನ ಜನಪ್ರಿಯ ಅಡುಗೆ ಕಾರ್ಯಕ್ರಮ ‘ಸವಿರುಚಿ’ಯನ್ನು ಮತ್ತೆ ಆರಂಭಿಸಲಿದೆ. ಯುಗಾದಿ ಹಬ್ಬದ ದಿನವೇ ಈ ಹೊಸ ಕಾರ್ಯಕ್ರಮ ಆರಂಭವಾಗಲಿದೆ ಎ್ನಲಾಗುತ್ತಿದೆ. ಬೆಳ್ಳುಳ್ಳಿ ಕಬಾಬ್ ಮೂಲಕ ಎಲ್ಲೆಡೆ ಹೆಸರಾಗಿರುವ ಬಿ.ಕೆ ಚಂದ್ರು ಇನ್ನು ಮುಂದೆ ಅಡುಗೆಯ ಘಮವನ್ನು ರಾಜ್ಯದ ತುಂಬೆಲ್ಲ ಹರಿಸಲಿದ್ದಾರೆ.