ಗಡ್ಡ ಬಿಟ್ಟರೇ ಟ್ಯಾಗೋರ್, ಕೈ ಎತ್ತಿ ತೋರಿಸಿದ್ರೆ ಅಂಬೇಡ್ಕರ್ ಆಗಲ್ಲ : ಮೋದಿಗೆ ಹೆಚ್.ಕೆ.ಪಾ ಡಿಚ್ಚಿ
ಗದಗ : ಗಡ್ಡ ಬಿಟ್ಟರೇ ರವೀಂದ್ರನಾಥ ಟ್ಯಾಗೋರ್, ಕೈ ಎತ್ತಿ ತೋರಿಸಿದ್ರೆ ಅಂಬೇಡ್ಕರ್, ನಮ್ಮ ಯೋಧರ ಸಮವಸ್ತ್ರ ಧರಿಸಿದ್ರೆ ನೀವು ಸುಭಾಶ್ ಚಂದ್ರ ಬೋಸ್, ಹೆಗಲಮೇಲೆ ಶಾಲು ಹಾಕಿಕೊಂಡರೇ ಸರ್ದಾರ್ ವಲ್ಲಭಭಾಯ್ ಪಟೇಲ್ ನೀವಾಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಎಂದು ಗದಗದಲ್ಲಿ ಪ್ರತಿಭಟನೆ ನಡೆಯಿತು.
ಇದರಲ್ಲಿ ಭಾಗಿಯಾಗಿ ಹೆಚ್ ಕೆ ಪಾಟೀಲ್ ಅವರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುಳ್ಳು ಹೇಳುತ್ತಾ ದೇಶದ ಜನರಿಗೆ ಮೋದಿ ಮೋಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.
ಕೊರೋನಾ ಸಂಕಷ್ಟದಲ್ಲಿ ಜನರಿದ್ದು, ಇಂತಹ ಸಂದರ್ಭದಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬೆಲೆ ಇಳಿಕೆ ಕ್ರಮ ಕೈಗೊಳ್ಳಬೇಕು.
ಇಲ್ಲದಿದ್ದರೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಇನ್ನು ನೀವು ಗಡ್ಡ ಬಿಟ್ಟರೇ ರವೀಂದ್ರನಾಥ ಟ್ಯಾಗೋರ್, ಕೈ ಎತ್ತಿ ತೋರಿಸಿದ್ರೆ ಅಂಬೇಡ್ಕರ್, ನಮ್ಮ ಯೋಧರ ಸಮವಸ್ತ್ರ ಧರಿಸಿದ್ರೆ ನೀವು ಸುಭಾಶ್ ಚಂದ್ರ ಬೋಸ್, ಹೆಗಲಮೇಲೆ ಶಾಲು ಹಾಕಿಕೊಂಡರೇ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗಲ್ಲ ಅಂತಾ ಟೀಕೆ ಮಾಡಿದರು.