ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಯಾದ ಬೆನ್ನಲ್ಲಿಯೇ ದೂರದರ್ಶನವು ಮತ್ತೆ ರಾಮಾಯಣ (Ramayana) ಧಾರಾವಾಹಿ ಪ್ರಸಾರ ಮಾಡಲು ಮುಂದಾಗಿದೆ.
ಹೀಗಾಗಿ ಇಂದಿನಿಂದ ರಾಮಾಯಣ ಧಾರಾವಾಹಿಯು ಸಂಜೆ 6ಕ್ಕೆ ಮತ್ತು ಮರುದಿನ ಮಧ್ಯಾಹ್ನ 12ಕ್ಕೆ ಮರು ಪ್ರಸಾರ ವಾಗಲಿದೆ. ರಾಮಾಯಣ ಧಾರಾವಾಹಿ ಸುಮಾರು ಮೂವತ್ತಾರು ವರ್ಷಗಳ ಹಿಂದೆ ದೇವರ ದರ್ಶನವಾಗಿದೆಯೇನೋ ಎಂಬಂತೆ ಪ್ರಸಾರವಾಗುತ್ತಿತ್ತು. ರಮಾನಂದ್ ಸಾಗರ್ ನಿರ್ದೇಶನದ ಧಾರಾವಾಹಿ (Serial). 1987ರಲ್ಲಿ ಅಂದಿನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿತ್ತು. ಆಗ ಕಪ್ಪು ಬಿಳುಪು ಹಾಗೂ ಕಲರ್ ಟಿವಿಗಳಲ್ಲಿ ರಾಮಾಯಣ ನೋಡಲು ಜನರು ಮುಗಿ ಬೀಳುತ್ತಿದ್ದರು. ನೋಡುವಾಗ ಪ್ರತಿಯೊಬ್ಬರು ಶ್ರೀರಾಮ ಹಾಗೂ ಸೀತೆಯನ್ನು ಕಂಡು ಕೈ ಮುಗಿಯುತ್ತಿದ್ದರು.
ಭಾನುವಾರ ಬೆಳಿಗ್ಗೆ 10 ಆಯಿತೆಂದರೆ ಸಾಕು ಎಲ್ಲ ಬೀದಿಗಳು ಭಣಗುಡುತ್ತಿದ್ದವು. ಕೆಲವರು ಟಿವಿ ಪರದೆಗೆ ಪೂಜೆ ಮಾಡುತ್ತಿದ್ದರು. ಹೂವಿನ ಹಾರ ಹಾಕಿ, ದೀಪ ಬೆಳಗಿ, ಆರತಿ ಎತ್ತಿ ಶ್ರೀರಾಮ ಹಾಗೂ ಸೀತಾದೇವಿಯನ್ನು ಬರಮಾಡಿಕೊಳ್ಳುತ್ತಿದ್ದರು. ಕೆಲವು ಕಡೆ ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಗಲಾಟೆ ಕೂಡ ನಡೆಯುತ್ತಿದ್ದವು.
ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕ್ಲಿಯಾ, ರಾವಣನಾಗಿ ಅರವಿಂದ್ ತ್ರಿವೇದಿ ಹಾಗೂ ಹನುಮಂತನಾಗಿ ಧಾರಾಸಿಂಗ್ ಉತ್ತಮ ನಟನೆ ಮಾಡಿದ್ದಾರೆ. ಯಾವುದೇ ತಂತ್ರಜ್ಞಾನ ಇಲ್ಲದೇ, ಎಲ್ಲವನ್ನು ಕ್ಯಾಮೆರಾದಿಂದಲೇ ರಮಾನಂದ ಸಾಗರ್ ರಾಮಾಯಣ ಕಥೆಯನ್ನು ಮನಮುಟ್ಟುವಂತೆ ರಚಿಸಿದ್ದಾರೆ. ಈಗ ಮತ್ತೊಮ್ಮೆ ನೋಡುಗರು ಈ ಧಾರಾವಾಹಿ ಕಣ್ತುಂಬಿಕೊಳ್ಳಬಹುದು.