ಮಂಗಳೂರು : ಬೀದಿ ನಾಯಿಗೆ ಗುಂಡಿಟ್ಟ ಪ್ರಕರಣ – ಆರೋಪಿಗೆ ನೋಟಿಸ್ ಜಾರಿ
ಮಂಗಳೂರಿನಲ್ಲಿ ಇತ್ತೀಚೆಗೆ ಬೀದಿ ನಾಯಿಗೆ ಗುಂಡು ಹಾರಿಸಿದ್ದ ಪ್ರಕರಣ ಸಂಬಂಧ ಕದ್ರಿ ಪೊಲೀಸರು ಸ್ಥಳೀಯ ನಿವಾಸಿ ಅನಿಲ್ ಸೋನ್ಸ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ನಾಯಿಯನ್ನು ಗುಂಡಿಕ್ಕಿ ಕೊಲ್ಲಲು ಕಾರಣ ಏನು ಎಂಬ ಬಗ್ಗೆ ಠಾಣೆಗೆ ಹಾಜರಾಗಿ ವಿವರಣೆ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಆರೋಪಿ ನೀಡುವ ಕಾರಣ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ1ರ ಸಂಜೆ 5 ಗಂಟೆಗೆ ಕದ್ರಿ ಶಿವಭಾಗ್ ನ ಸಾರ್ವಜನಿಕ ಸ್ಥಳದಲ್ಲಿ ಬೀದಿ ನಾಯಿಯೊಂದು ಸತ್ತು ಬಿದ್ದಿತ್ತು. ನಾಯಿಯ ಮೇಲೆ ರಕ್ತ ಇರುವ ಬಗ್ಗೆ ಎನಿಮಲ್ ಕೇರ್ ಟ್ರಸ್ಟ್ನವರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಅದರಂತೆ ಟ್ರಸ್ಟ್ ನ ಸುಮಾ ಆರ್. ನಾಯಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಾಯಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ದೇಹದಲ್ಲಿ ಗುಂಡಿನಂತಹ ವಸ್ತು ಪತ್ತೆಯಾಗಿದ್ದು, ಏರ್ ಗನ್ನಿಂದ ಗುಂಡು ಹೊಡೆದಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿತ್ತು. ದೂರುದಾರರು ಸ್ಥಳೀಯ ನಿವಾಸಿ ಅನಿಲ್ ಸೋನ್ಸ್ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.. ದೂರಿನಲ್ಲಿ ಆತನ ಹೆಸರು ದಾಖಲಿಸಿದ್ದನ್ನು ಆಧರಿಸಿ, ಪೊಲೀಸರು ನೋಟಿಸ್ ನೀಡಿದ್ದಾರೆ.