ಸ್ಯಾಂಡಲ್ ವುಡ್ ನಲ್ಲಿ ನೈಜ ಘಟನೆ ಆಧಾರಿತ ಸಾಕಷ್ಟು ಚಿತ್ರಗಳು ಮೂಡಿ ಬಂದಿವೆ. ಈ ಮಧ್ಯೆ ಅತ್ಯಾಚಾರ ಹಾಗೂ ಕೊಲೆಗೆ ಬಲಿಯಾಗಿರುವ ಯುವತಿಯ ಕುರಿತು ಚಿತ್ರವೊಂದು ಬರಲು ಸಿದ್ಧವಾಗುತ್ತಿದೆ.
ಇತ್ತೀಚೆಗೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಧರ್ಮಸ್ಥಳದ (Dharmasthala) ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಈಗ ಚಿತ್ರ ರೂಪ ಪಡೆಯುತ್ತಿದೆ. 2012ರಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅವರನ್ನು ಅಕ್ಟೋಬರ್ 9ರಂದು ಅಪಹರಿಸಲಾಗಿತ್ತು. ಅಂದೇ ಕಾಣೆಯಾದ ಕುರಿತು ದೂರು ಕೂಡ ದಾಖಲಾಗಿತ್ತು. ಆದರೆ, 2012ರ ಅಕ್ಟೋಬರ್ 10 ರಂದು ಧರ್ಮಸ್ಥಳದ ಮಣ್ಣಸಂಖದಲ್ಲಿ ಅವರ ಶವ ಪತ್ತೆ ಆಗಿತ್ತು. ಸೌಜನ್ಯ ಮೇಲೆ ಅತ್ಯಾಚಾರ ಕೂಡ ನಡೆದಿತ್ತು. ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂತೋಷ್ ರಾವ್ ಅವರು ನಿರ್ದೋಷಿ ಎಂದು ಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ.
ಹೀಗಾಗಿಯೇ ಸೌಜನ್ಯ ಜೀವನ ಆಧರಿಸಿ ಸಿನಿಮಾ ಆಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ. ಜಿಕೆ ವೆಂಚರ್ಸ್ ಈ ಟೈಟಲ್ ನೋಂದಣಿ ಮಾಡಿಸಿದೆ. ವಿ. ಲವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.