ಸದ್ಯ ಹುಲಿ ಉಗುರಿನ ವಿಚಾರ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಸೆಲೆಬ್ರಿಟಿಗಳ ಕೊರಳಲ್ಲಿ ಹುಲಿ ಉಗುರು (Tiger Claw) ಕಂಡ ನೆಟ್ಟಿಗರು, ಒಂದೊಂದೇ ಫೋಟೋ ಶೇರ್ ಮಾಡುತ್ತಾ ವೈರಲ್ ಮಾಡುತ್ತಿದ್ದಾರೆ. ಜಗ್ಗೇಶ್ ಮೇಲೆ ಕ್ರಮಕ್ಕೆ ಹಲವರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ನಟ ಜಗ್ಗೇಶ್ ಎಕ್ಸ್ (ಟ್ವಿಟರ್) ಮೂಲಕ ತಮ್ಮ ನೋವು ಹಂಚಿಕೊಂಡಿದ್ದಾರೆ.
ನನಗೆ 61. ಮುಂದೆ 100 ಆದರೂ ಅಮ್ಮನೇ ನನ್ನ ದೇವರು. ನಾನು ಏನೇ ಕಳೆದುಕೊಂಡರೂ ಸಂಕಟ ಪಡಲ್ಲ. ಆದರೆ, ನನ್ನ ಅಮ್ಮನ ಕಡೇ ಪ್ರೀತಿ ಕಳೆದುಕೊಂಡಿದ್ದು ಶೂನ್ಯದಂತೆ ಆಯಿತು. ತಂದೆ- ತಾಯಿ ಹೃದಯದಲ್ಲಿ ಇರಿಸಿಕೊಂಡ ನನಗೆ ತಂದೆ- ತಾಯಿ ಅನಾಥಾಶ್ರಮಕ್ಕೆ ಅಟ್ಟುವ ಈ ಕಾಲದ ಕಾಲಜ್ಞಾನಿಗಳಿಗೆ ಪ್ರೀತಿ ಅರಿವಾಗದು. ದೇವರಿದ್ದಾನೆ ಉತ್ತರಿಸಲು. ಕಾಲ ಬರುತ್ತದೆ ನಿಮಗೂ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ಎಕ್ಸ್ ಮಾಡಿ, ‘ಹೋರಾಡುವ ಸಹೋದರ ಸಹೋದರಿಯರೆ, ಖಂಡಿತ ನಿಮ್ಮ ಅವಶ್ಯಕತೆ ಸಮಾಜಕ್ಕೆ ಇದೆ. ಸಮಾಜದಲ್ಲಿ ಅನೇಕ ಕಾಡುಪ್ರಾಣಿ ರೂಪದ ಜನ ಹೆಚ್ಚಿದ್ದಾರೆ. ಕೊಳಕರ ಬೆತ್ತಲುಮಾಡಿ. ಭಾಷೆ, ಭ್ರಷ್ಟಾಚಾರ ಪಾಪಕೃತ್ಯ ನೋಡಿದರು ಮೌನಮುನಿಗಳು. ಕಲಾವಿದರ ವಿಷಯ ಬಂದರೆ ಆರ್ಭಟವೇಕೆ? ನಿಮ್ಮನ್ನು ರಂಜಿಸಿದಕ್ಕೆ ನೀಡುವ ಉಡುಗೊರೆಯೇ? ಆದರು ನಿಮಗೆ ಶುಭಕೋರುವೆ ಎಂದು ಬರೆದುಕೊಂಡಿದ್ದಾರೆ.
ಅರಣ್ಯಾಧಿಕಾರಿಗಳ ದಾಳಿ ಕಾನೂನು ಬಾಹಿರ. ಅರಣ್ಯಾಧಿಕಾರಿಗಳ ಕ್ರಮ ಸರಿಯಲ್ಲ ಎಂದು ಹೈಕೋರ್ಟ್ ಗೆ ಜಗ್ಗೇಶ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ನಡೆ ಕಾನೂನು ಬಾಹಿರ ಎಂದು ಘೋಷಿಸಲು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಅರಣ್ಯಾಧಿಕಾರಿಗಳು ಕೊಟ್ಟಿರುವ ನೋಟೀಸ್ ಅನ್ನು ರದ್ದು ಪಡಿಸಲು ನಟ ಜಗ್ಗೇಶ್ ಮನವಿ ಮಾಡಿದ್ದಾರೆ.